ಸಿಂಗಪುರ (ಪಿಟಿಐ): ಕಳೆದ ವಾರ ಕಣ್ಮರೆಯಾಗಿದ್ದ ಕಟ್ಟಡ ಕಾರ್ಮಿಕ ಭಾರತೀಯ ಮೂಲದ ರಾಮನ್ ಸೆಲ್ವಂನ ಶವವನ್ನು ಸೋಮವಾರ ಜಲಾಶಯವೊಂದರಿಂದ ಹೊರ ತೆಗೆಯಲಾಗಿದೆ.
ಶನಿವಾರದಿಂದ 33 ವರ್ಷದ ರಾಮನ್ ಕಾಣೆಯಾಗಿದ್ದಾನೆ ಎಂದು ವರದಿಯಾಗಿದ್ದು ಆತ ಜಲಾಶಯದ ಕಡೆಗೆ ಹೋಗುತ್ತಿದ್ದುದ್ದನ್ನು ಕಡೆಯ ಬಾರಿ ನೋಡಿದ ವರದಿಯಾಗಿದೆ ಎಂದು ಸ್ಥಳೀಯ ಪತ್ರಿಕೆ ಹೇಳಿದೆ.
ದಾರಿ ಹೋಕರು ಜೀವರಕ್ಷಕ ಸಾಧನವನ್ನು ಆತನೆಡೆಗೆ ಎಸೆಯಲು ಹೋದಾಗ ಆತ ಸಹಾಯ ನಿರಾಕರಿಸಿದ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ವಿವಾಹಿತನಾಗಿದ್ದ ಆತ ಒಂದು ವಾರದಿಂದ ವಿಚಿತ್ರರೀತಿ ವರ್ತಿಸುತ್ತಿದ್ದ ಎಂದೂ ವರದಿಗಳು ತಿಳಿಸಿವೆ.
ಸಿಂಗಪುರದ ನಾಗರಿಕ ರಕ್ಷಣಾ ಪಡೆ ಮತ್ತು ನೌಕಾ ಘಟಕದ 20ಕ್ಕೂ ಹೆಚ್ಚು ಅಧಿಕಾರಿಗಳು ಕಳೆದ ಒಂದು ವಾರದಿಂದ ಶವಕ್ಕಾಗಿ ಶೋಧ ನಡೆಸಿದ್ದರು. ಜಲಾಶಯದಿಂದ ಸುಮಾರು 500 ಮೀಟರ್ ದೂರದ ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ರಾಮನ್ ಕೆಲಸ ಮಾಡುತ್ತಿದ್ದ.