ಹೈದರಾಬಾದ್/ ಅಗರ್ತಲಾ (ಪಿಟಿಐ): ರಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದು ದೇಶಕ್ಕೆ ಹೆಮ್ಮೆ ತಂದಿತ್ತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಸೋಮವಾರ ಬೆಳಿಗ್ಗೆ ಹೈದರಾಬಾದ್ಗೆ ಮರಳಿದ್ದು, ಸಂಭ್ರಮದ ಸ್ವಾಗತ ಲಭಿಸಿತು.
ಜಿಮ್ನಾಸ್ಟಿಕ್ಸ್ನಲ್ಲಿ ನಾಲ್ಕನೇ ಸ್ಥಾನ ಪಡೆದು ಐತಿಹಾಸಿಕ ಸಾಧನೆ ಮಾಡಿದ ದೀಪಾ ಕರ್ಮಾಕರ್ ಅವರಿಗೆ ತ್ರಿಪುರಾದ ಅಗರ್ತಲಾದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು. ಸಿಂಧು ಅವರನ್ನು ಸ್ವಾಗತಿಸಲು ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು.
ನಾಲ್ವರಿಗೆ ಖೇಲ್ ರತ್ನ (ನವದೆಹಲಿ ವರದಿ): ಪಿ.ವಿ. ಸಿಂಧು, ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಮತ್ತು ಶೂಟರ್ ಜಿತು ರಾಯ್ ಅವರಿಗೆ ರಾಜೀವ್ಗಾಂಧಿ ಖೇಲ್ ರತ್ನ ಪುರಸ್ಕಾರ ನೀಡಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವಾಲಯ ಸೋಮವಾರ ಘೋಷಿಸಿದೆ.
ಇದೇ ಮೊದಲ ಬಾರಿಗೆ ಖೇಲ್ ರತ್ನ ಪ್ರಶಸ್ತಿಯನ್ನು ನಾಲ್ವರಿಗೆ ನೀಡಲಾಗುತ್ತಿದೆ. ಈ ಪ್ರಶಸ್ತಿಯು ಪದಕ, ಪ್ರಮಾಣಪತ್ರ ಮತ್ತು
₹ 7.5 ಲಕ್ಷ ನಗದು ಒಳಗೊಂಡಿದೆ.