ನವದೆಹಲಿ (ಪಿಟಿಐ): ರಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ ಪಿ.ವಿ. ಸಿಂಧು, ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಜಿಮ್ನಾಸ್ಟಿಕ್ಸ್ ಪಟು ದೀಪಾ ಕರ್ಮಾಕರ್ ಮತ್ತು ಶೂಟರ್ ಜಿತು ರಾಯ್ ಅವರಿಗೆ ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿ ಪ್ರಕಟಿಸಲಾಗಿದೆ.
ಒಲಿಂಪಿಕ್ಸ್ನ ಬ್ಯಾಡ್ಮಿಂಟನ್ ಸ್ಪರ್ಧೆಯ ಮಹಿಳೆಯರ ಸಿಂಗಲ್ಸ್ನಲ್ಲಿ ಹೈದರಾಬಾದಿನ ಸಿಂಧು ಬೆಳ್ಳಿ ಗೆದ್ದಿದ್ದರು. ವನಿತೆಯರ 58 ಕೆಜಿ ಕುಸ್ತಿ ವಿಭಾಗದಲ್ಲಿ ಹರಿಯಾಣದ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದಿದ್ದರು. ಒಲಿಂಪಿಕ್ಸ್ ವನಿತೆಯರ ಜಿಮ್ನಾಸ್ಟಿಕ್ಸ್ ನಲ್ಲಿ ಸ್ಪರ್ಧಿಸಿದ ಪ್ರಥಮ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ಫೈನಲ್ ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.
ಜೀತು ರಾಯ್ ಏಷ್ಯನ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಜಯಿಸಿದ್ದರು. ರಿಯೊ ಒಲಿಂಪಿಕ್ಸ್ ನಲ್ಲಿಯೂ ಅವರು ಸ್ಪರ್ಧಿಸಿದ್ದರು.
ನಂದಿ, ಶರ್ಮಾಗೆ ದ್ರೋಣಾಚಾರ್ಯ
ಜಿಮ್ನಾಸ್ಟಿಕ್ಸ್ ಪಟು ದೀಪಾ ಕರ್ಮಾಕರ್ ಅವರ ಕೋಚ್ ವಿಶ್ವೇಶ್ವರ್ ನಂದಿ ಮತ್ತು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಕೋಚ್ ರಾಜಕುಮಾರ್ ಶರ್ಮಾ ಅವರು ಸೇರಿದಂತೆ ಆರು ಮಂದಿ ಕೋಚ್ಗಳಿಗೆ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಘುನಾಥ್, ಲಲಿತಾಗೆ ಅರ್ಜುನ
ಭಾರತ ಹಾಕಿ ತಂಡದ ಆಟಗಾರ, ಕೊಡಗಿನ ವಿ.ಆರ್. ರಘುನಾಥ್ ಮತ್ತು ಒಲಿಂಪಿಕ್ಸ್ನಲ್ಲಿ 3000 ಮೀ. ಸ್ಟೀಪಲ್ಚೇಸ್ನಲ್ಲಿ 10ನೇ ಸ್ಥಾನ ಪಡೆದಿದ್ದ ಲಲಿತಾ ಬಾಬರ್, ಕ್ರಿಕೆಟಿಗ ಅಜಿಂಕ್ಯ ರಹಾನೆ ಸೇರಿದಂತೆ 15 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದವರಿಗೆ ಪದಕ, ಪ್ರಮಾಣಪತ್ರ ಮತ್ತು ₹7.5 ಲಕ್ಷ ನಗದು ನೀಡಲಾ ಗುವುದು. ಅರ್ಜುನ, ದ್ರೋಣಾಚಾರ್ಯ ಮತ್ತು ಧ್ಯಾನ್ಚಂದ್ ಪುರಸ್ಕೃತರಿಗೆ ತಲಾ ₹ 5 ಲಕ್ಷ ನೀಡಲಾಗುವುದು. ಅದರೊಂದಿಗೆ ಪ್ರಮಾಣಪತ್ರ ಮತ್ತು ವಿಗ್ರಹಗಳನ್ನು ನೀಡಲಾಗುತ್ತದೆ. ಪಟಿಯಾಲದ ಪಂಜಾಬಿ ವಿಶ್ವವಿದ್ಯಾಲಯಕ್ಕೆ ಮೌಲಾನಾ ಅಬುಲ್ ಕಲಾಮ್ ಆಜಾದ್ ಟ್ರೋಫಿ ನೀಡಲಾಗಿದೆ.
ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹ ಪುರಸ್ಕಾರ 2016
*ಹಾಕಿ ಸಿಟಿಜನ್ ಗ್ರುಪ್, ದಾದರ್ ಪಾರ್ಸೀ ಜೊರೊಸ್ಟ್ರೇನ ಕ್ರಿಕೆಟ್ ಕ್ಲಬ್, ಉಷಾ ಅಥ್ಲೆಟಿಕ್ಸ್ ಶಾಲೆ ಸ್ಟೇರ್ಸ್ (ಯುವ ಮತ್ತು ಉದಯೋನ್ಮುಖ ಪ್ರತಿಭೆ )
*ಇಂಡಿಯಾ ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಾರ್ಪೋರೇಷನ್
(ಕ್ರೀಡಾ ಬೆಳವಣಿಗೆಗೆ ಪ್ರೋತ್ಸಾಹ–ಕಾರ್ಪೋರೆಟ್ ಸಾಮಾಜಿಕ ಹೊಣೆ)
* ಕ್ರೀಡಾಪಟುಗಳಿಗೆ ಉದ್ಯೋಗ ಮತ್ತು ಕಲ್ಯಾಣ (ಭಾರತೀಯ ರಿಸರ್ವ್ ಬ್ಯಾಂಕ್)
* ಅಭಿವೃದ್ಧಿಗಾಗಿ ಕ್ರೀಡೆ(ಸುಬ್ರತೊ ಮುಖರ್ಜಿ ಸ್ಪೋರ್ಟ್ಸ್ ಎಜ್ಯುಕೇಷನ್ ಸೊಸೈಟಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.