ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧು ಸೌಖ್ಯ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೆಲ್ಲನೆ ದನಿಯಲ್ಲಿ ಮಾತನಾಡುವ ಮಿಂಚುಳ್ಳಿಯಂಥ ಚೆಲುವೆ ಸಿಂಧು ಲೋಕನಾಥ್. ಅವರೀಗ `ಕೇಸ್ ನಂ.18/9~ ಚಿತ್ರದಲ್ಲಿ ಮೇಕಪ್ ಇಲ್ಲದ ಪಾತ್ರದಲ್ಲಿ ನಟಿಸುತ್ತಿದ್ದಾರೆ. `ಡ್ರಾಮಾ~ ಚಿತ್ರದಲ್ಲಿ ಮೂಕಿಯಾಗಿ ನಟಿಸಿರುವ ಅವರು ಮತ್ತೊಂದು ಸವಾಲಿನ ಪಾತ್ರ ಸಿಕ್ಕ ಖುಷಿಯಲ್ಲಿದ್ದಾರೆ.

`ಕೇಸ್ ನಂ.18/9~ ತಮಿಳಿನ `ವಳಕ್ಕು ಎನ್ 18/9~ ಚಿತ್ರದ ರಿಮೇಕ್. `ಧಿಮಾಕು~ ಮತ್ತು `ಮುರಳಿ ಮೀಟ್ಸ್ ಮೀರಾ~ ಚಿತ್ರಗಳನ್ನು ನಿರ್ದೇಶಿಸಿದ್ದ ಮಹೇಶ್ ರಾವ್ ಈ ಚಿತ್ರದ ಹೊಣೆ ಹೊತ್ತಿದ್ದಾರೆ.

`ಇದರಲ್ಲಿ ನನ್ನದು ಮೇಕಪ್ ಇಲ್ಲದ ಹುಡುಗಿಯ ಪಾತ್ರ. ತುಂಬಾ ಗಂಭೀರವಾದ ಪಾತ್ರ ಕೂಡ. ನನ್ನ ಮನಸ್ಸಿಗೆ ಮೂಲ ಸಿನಿಮಾ ತುಂಬಾ ಹಿಡಿಸಿತು. ವಾಸ್ತವಕ್ಕೆ ಹತ್ತಿರವಾದ ಸಿನಿಮಾ ಇದು. ಅಭಿನಯಿಸಲು ನನಗೆ ಒಳ್ಳೆಯ ಅವಕಾಶ ಎನಿಸಿತು. ಮೌನವಾಗಿದ್ದುಕೊಂಡು ಕಣ್ಣಿನಲ್ಲಿಯೇ ಭಾವಾಭಿನಯ ಅಭಿವ್ಯಕ್ತಿಪಡಿಸುವ ಪಾತ್ರ ನನ್ನದು~ ಎಂದು ಪಾತ್ರವನ್ನು ವಿವರಿಸುತ್ತಾರೆ ಸಿಂಧು.

ಇತ್ತೀಚೆಗಷ್ಟೇ ಪುನೀತ್ ರಾಜ್‌ಕುಮಾರ್, ಯೋಗೀಶ್ ಅವರೊಂದಿಗೆ `ಯಾರೇ ಕೂಗಾಡಲಿ~ ಮತ್ತು ಅಜಯ್ ರಾವ್ ಅವರೊಂದಿಗೆ `ಜೈ ಭಜರಂಗಬಲಿ~ ಚಿತ್ರವನ್ನು ಪೂರೈಸಿದ್ದಾರೆ. ಹಾಗೆಯೇ ಸಿಂಧು, `ನನ್ನ ಲೈಫಲಿ~ ಮತ್ತು `ಸ್ಯಾಂಡಲ್‌ವುಡ್ ಸರಿಗಮ~ ಚಿತ್ರಗಳ ಬಿಡುಗಡೆಗೆ ಕಾಯುತ್ತಿದ್ದಾರೆ.

`ಡ್ರಾಮಾ~ ಚಿತ್ರದ ಬಗ್ಗೆ ಸಿಂಧು ಅವರಿಗೆ ಅಪಾರ ಭರವಸೆ. `ಚಿತ್ರೀಕರಣ ಮುಕ್ತಾಯವಾದ ನಂತರ ಚಿತ್ರವನ್ನು ನೋಡಲು ನಿರ್ದೇಶಕ ಯೋಗರಾಜ್ ಭಟ್ ಅವರು ಕರೆದರು. ನನಗೆ ಈಗಲೇ ನೋಡಲು ಇಷ್ಟವಿಲ್ಲ. ಯಾಕೆಂದರೆ ಚಿತ್ರ ಬಿಡುಗಡೆಯಾದ ನಂತರ ಪ್ರೇಕ್ಷಕರ ನಡುವೆ ಕುಳಿತು ನೋಡುವ ಅನುಭವ ನನಗಿಷ್ಟ. ಅದರಿಂದ ನಯವಾಗಿಯೇ ಅವರ ಆಹ್ವಾನವನ್ನು ನಿರಾಕರಿಸಿದೆ~ ಎನ್ನುವ ಈ ಚೆಲುವೆಗೆ `ಡ್ರಾಮಾ~ದ ತಮ್ಮ ಕಾಮಿಡಿ ಪಾತ್ರ ಜನರಿಗೆ ಇಷ್ಟವಾಗಬಹುದು ಎನಿಸಿದೆ.

ಇನ್ನು `ಯಾರೇ ಕೂಗಾಡಲಿ~ ಚಿತ್ರದಲ್ಲಿ ಯೋಗಿಗೆ ಜೋಡಿಯಾಗಿ ನಟಿಸಿದ್ದು ಅವರ ಖುಷಿಯನ್ನು ಇಮ್ಮಡಿಯಾಗಿಸಿದೆ. `ಖ್ಯಾತ ಛಾಯಾಗ್ರಾಹಕ ಸುಕುಮಾರನ್, ಖ್ಯಾತ ನಿರ್ದೇಶಕ ಸಮುದ್ರ ಖಣಿ, ಪುನೀತ್ ರಾಜ್‌ಕುಮಾರ್, ಯೋಗೀಶ್ ಎಂದೂ ದೊಡ್ಡವರಂತೆ ವರ್ತಿಸಲಿಲ್ಲ. ಪುನೀತ್ ಸಹಜವಾಗಿ ನಮ್ಮಂದಿಗೆ ಬೆರೆಯುತ್ತಿದ್ದರು.

ನಾನು ಪುನೀತ್, ಯೋಗಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿರುತ್ತೇವೆ. ಅದು ಕೂಡ ವಾಸ್ತವಕ್ಕೆ ಹತ್ತಿರವಾದ ಸಿನಿಮಾ. ಆದ್ದರಿಂದ `ಯಾರೇ ಕೂಗಾಡಲಿ~ ಚಿತ್ರವನ್ನು ಕಮರ್ಷಿಯಲ್ ವಿಭಾಗಕ್ಕೆ ಸೇರಿಸಲು ನನ್ನ ಮನಸ್ಸು ಒಪ್ಪುವುದಿಲ್ಲ~ ಎಂದು ಮುಕ್ತವಾಗಿ ಹೇಳುತ್ತಾರೆ.

ನಿರ್ದೇಶಕ ಸಮುದ್ರ ಖಣಿ ಗಂಭೀರ ದೃಶ್ಯಗಳ ಚಿತ್ರೀಕರಣದ ವೇಳೆ ಯಾರೊಂದಿಗೂ ಮಾತನಾಡದೇ ಗಂಭೀರವದನರಾಗಿ ಇರುತ್ತಿದ್ದರು. ಆದರೆ ಸನ್ನಿವೇಶಗಳ ಚಿತ್ರೀಕರಣ ಮುಗಿದ ನಂತರ ನಿರಾಳವಾಗಿ ನಗುತ್ತಿದ್ದರು ಅಂತ ಸಿಂಧು ಕಣ್ಣು ಅರಳಿಸುತ್ತಾರೆ.

ಈ ವರ್ಷ ಒಂದಾದ ಮೇಲೊಂದರಂತೆ ಬರುತ್ತಿರುವ ಅವಕಾಶಗಳ ಬಗ್ಗೆ ಸಿಂಧುಗೆ ಖುಷಿ ಇದೆ. ಆದರೆ ಅವಕಾಶಗಳನ್ನು ಅರಸುತ್ತಿದ್ದ ದಿನಗಳನ್ನು ಮೆಲುಕು ಹಾಕುವುದನ್ನೂ ಮರೆಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT