ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಕಾಯ್ದೆ ಜಾರಿಗೆ ತಡೆ

ಮಾತುಕತೆ ಮೂಲಕ ಸೀಟು ಹಂಚಿಕೆ, ಶುಲ್ಕ ನಿಗದಿ
Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿ ಸಂಘಟನೆ­ಗಳು ಹಾಗೂ ಕೆಲ ರಾಜಕೀಯ ಪಕ್ಷಗಳ ತೀವ್ರ ವಿರೋಧಕ್ಕೆ ಮಣಿದ ಸರ್ಕಾರ ‘2006ರ ಕರ್ನಾಟಕ ವೃತ್ತಿಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ’ಯನ್ನು 2014–15ನೇ ಸಾಲಿಗೆ ತಡೆಹಿಡಿಯಲು ತೀರ್ಮಾನಿಸಿದೆ.

ಸಚಿವ ಸಹೋದ್ಯೋಗಿಗಳು, ಹಿರಿಯ ಅಧಿಕಾರಿಗಳೊಂದಿಗೆ ಶುಕ್ರ­ವಾರ ಚರ್ಚೆ ನಡೆಸಿದ ನಂತರ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರು  ನಿರ್ಧಾರ  ಪ್ರಕಟಿಸಿ­ದರು. ಇದರಿಂದ ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಶುಲ್ಕ ದುಬಾರಿ­ಯಾಗುವುದಿಲ್ಲ.
ಶಿಕ್ಷಣ ತಜ್ಞರು, ವಿರೋಧ ಪಕ್ಷಗಳು, ಪೋಷಕರು, ವಿದ್ಯಾರ್ಥಿ ಸಂಘಟನೆಗಳೊಂದಿಗೆ ಚರ್ಚಿಸಿದ ನಂತರ 2006ರ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ಕಳೆದ ಬಾರಿಯ ಹಾಗೆ ಮುಂದಿನ ವರ್ಷವೂ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳೊಂದಿಗೆ ಚರ್ಚೆ ನಡೆಸಿ ಪರಸ್ಪರ ಮಾತುಕತೆ ಮೂಲಕ ಸೀಟು ಹಂಚಿಕೆ, ಶುಲ್ಕ ನಿಗದಿ ಒಪ್ಪಂದ ಮಾಡಿಕೊಳ್ಳ­ಲಾಗುತ್ತದೆ ಎಂದರು.

2006ರ ಕಾಯ್ದೆಯನ್ನು  ಎಚ್‌.ಡಿ.­ಕುಮಾರ­ಸ್ವಾಮಿ, ಬಿ.ಎಸ್‌.ಯಡಿ­ಯೂ­ರಪ್ಪ, ಡಿ.ಎಚ್‌.­­ಶಂಕರ­ಮೂರ್ತಿ (ಕ್ರಮ­ವಾಗಿ ಆಗಿನ ಸಿಎಂ, ಉಪ ಮುಖ್ಯ­ಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿ­ವರು) ಸದುದ್ದೇಶದಿಂದ ರೂಪಿಸಿ­ದ್ದಾರೆ ಎಂದು ಭಾವಿಸಿ ವಿದ್ಯಾ­ರ್ಥಿ­ಗಳ ಹಿತ­ದೃಷ್ಟಿಯಿಂದ ಜಾರಿ­ಗೊಳಿ­ಸಲು ನಿರ್ಧರಿ­ಸಲಾಗಿತ್ತು ಎಂದು ವಿವರಿಸಿದರು.

ಸೀಟು ಕಡಿಮೆ ಆಗುವುದಿಲ್ಲ: ಕಾಯ್ದೆ ಜಾರಿಯಿಂದ ಸೀಟು­ಗಳು ಕಡಿಮೆ ಆಗು­ವು­ದಿಲ್ಲ. ಶುಲ್ಕ ಇನ್ನೂ ನಿಗದಿಯಾಗಿಲ್ಲ. ಆದರೂ ಮಾಹಿ­ತಿ ಕೊರತೆ, ತಪ್ಪು ಅಭಿಪ್ರಾ­ಯದಿಂದಾಗಿ ಕೆಲವರು ಚಳವಳಿ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ವರ್ಷದ ಮೇ ತಿಂಗಳಲ್ಲಿ ನಮ್ಮ ಸರ್ಕಾರ ಬಂದ ನಂತರ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗ­ಳೊಂದಿಗೆ ಮಾತುಕತೆ ನಡೆಸಿ 2013–14ನೇ ಸಾಲಿಗೆ ಶುಲ್ಕ ನಿಗದಿ ಮತ್ತು ಸೀಟು ಹಂಚಿಕೆ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮುಂದಿನ ವರ್ಷದಿಂದ ಕಾಯ್ದೆ ಜಾರಿಗೊಳಿಸ­ಲಾಗುವುದು ಎಂದು ಆ ಸಂದರ್ಭ­ದಲ್ಲೇ ತಿಳಿಸಲಾಗಿತ್ತು. ವಿಧಾನಮಂಡ­ಲದಲ್ಲೂ ಇದಕ್ಕೆ ಒಪ್ಪಿಗೆ ಪಡೆಯ­ಲಾಗಿತ್ತು. ಆಗ ಯಾರೂ ವಿರೋಧ ಮಾಡಿರಲಿಲ್ಲ’ ಎಂದರು.

ಶುಲ್ಕ ನಿಗದಿ ಮತ್ತು ಪ್ರವೇಶ ಮೇಲ್ವಿ­ಚಾರಣೆಗೆ ಎರಡು ಸಮಿತಿ­ಗಳನ್ನು ರಚಿಸಲಾಗಿತ್ತು. ಶುಲ್ಕ ನಿಗದಿ ಸಮಿತಿ ಇನ್ನೂ ವರದಿಯನ್ನೇ ನೀಡಿಲ್ಲ. ಆದರೂ ಶುಲ್ಕ ಜಾಸ್ತಿಯಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಿ­ರು­ವುದು ಸರಿಯಲ್ಲ ಎಂದರು.

ಉನ್ನತ ಶಿಕ್ಷಣ ಸಚಿವ ಆರ್‌.ವಿ.­ದೇಶ­ಪಾಂಡೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಗ್ರಾಮೀಣಾ­ಭಿವೃದ್ಧಿ ಸಚಿವ  ಎಚ್‌.ಕೆ.­ಪಾಟೀಲ, ಲೋಕೋಪ­ಯೋಗಿ ಸಚಿವ ಡಾ.ಎಚ್‌.ಸಿ.­ಮಹದೇವಪ್ಪ, ಉನ್ನತ ಶಿಕ್ಷಣ, ವೈದ್ಯಕೀಯ ಹಾಗೂ ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮತ್ತೆ ಹಗ್ಗಜಗ್ಗಾಟ......
2006ರ ಕಾಯ್ದೆ ತಡೆಹಿಡಿಯಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಖಾಸಗಿ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿಗಳೊಂದಿಗೆ ಚರ್ಚೆ ನಡೆಸಿ ಶುಲ್ಕ ನಿಗದಿ, ಸೀಟು ಹಂಚಿಕೆ ಸಂಬಂಧ ಪರಸ್ಪರ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ.

ಎಂಜಿನಿಯರಿಂಗ್‌ ಸೀಟುಗಳಿಗೆ ಅಷ್ಟಾಗಿ ಬೇಡಿಕೆ ಇಲ್ಲ. ಹೀಗಾಗಿ ಸರ್ಕಾರ ಕೇಳಿದಷ್ಟು ಸೀಟುಗಳನ್ನು ಬಿಟ್ಟುಕೊಡಲು ಖಾಸಗಿ ಕಾಲೇಜುಗಳು ಸಿದ್ಧವಾಗಿವೆ. ಆದರೆ, ವೈದ್ಯಕೀಯ/ದಂತ ವೈದ್ಯಕೀಯ ವಿಭಾಗದಲ್ಲಿ ಸೀಟುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದರಲ್ಲಿ ಸರ್ಕಾರಕ್ಕೆ ಎಷ್ಟು ಸೀಟುಗಳನ್ನು ಬಿಟ್ಟುಕೊಡಬೇಕು ಹಾಗೂ ಎಷ್ಟು ಶುಲ್ಕ ನಿಗದಿಪಡಿಸಬೇಕು ಎಂಬ ವಿಚಾರದಲ್ಲಿ ಈ ಬಾರಿಯೂ ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳೊಂದಿಗೆ ಹಗ್ಗಜಗ್ಗಾಟ ನಡೆಯಲಿದೆ. 2013–14ನೇ ಸಾಲಿಗೆ ಶುಲ್ಕ ಹಾಗೂ ಸೀಟು ಹಂಚಿಕೆಯಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಅಧಿಕಾರಕ್ಕೆ ಬಂದ ಆರಂಭದಲ್ಲೇ ಶುಲ್ಕ ಹೆಚ್ಚಳ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ 2012–13ನೇ ಸಾಲಿನ ಶುಲ್ಕವನ್ನೇ 2013–14ನೇ ಸಾಲಿಗೂ ಮುಂದುವರಿಸುವಂತೆ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಮನವೊಲಿಸಲು ಸರ್ಕಾರ ಸಫಲವಾಗಿತ್ತು.

ಆದರೆ, 2014–15ನೇ ಸಾಲಿನಲ್ಲಿ ಶುಲ್ಕ ಹೆಚ್ಚಳಕ್ಕೆ ಖಾಸಗಿ ಕಾಲೇಜುಗಳು ಪಟ್ಟು ಹಿಡಿಯುವ ಸಾಧ್ಯತೆಗಳಿವೆ. ಅಷ್ಟು ಸುಲಭವಾಗಿ  ಶುಲ್ಕ ನಿಗದಿ ಆಗುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT