ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಕಾಯ್ದೆ ವಿರೋಧಿಸಿ ಎಬಿವಿಪಿ ಧರಣಿ

Last Updated 19 ಡಿಸೆಂಬರ್ 2013, 5:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯ ಸರ್ಕಾರ 2006ರ ಸಿಇಟಿ ಕಾಯ್ದೆ ಜಾರಿಗೆ ತರಲು ನಿರ್ಧ­ರಿಸಿ­ರುವುದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ವಿವಿಧ ಕಾಲೇಜುಗಳಿಂದ ಬಂದು ರಾಣಿ ಚನ್ನಮ್ಮ ವೃತ್ತದಲ್ಲಿ ಜಮಾಯಿ­ಸಿದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಕೃತಿ ಸುಟ್ಟರು. ನಂತರ ತಹಶೀ­ಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಸರ್ಕಾರದ ನಿರ್ಧಾರದಿಂದ ಪ್ರತಿಭಾ­ವಂತ ಬಡ ವಿದ್ಯಾರ್ಥಿಗಳು ವೃತ್ತಿ ಶಿಕ್ಷಣದಿಂದ ವಂಚಿತರಾಲಿದ್ದಾರೆ. ದುರ್ಬಲ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗದ ಮತ್ತು ಅವರ ಶೈಕ್ಷಣಿಕ ಹಕ್ಕನ್ನು ಮೊಟಕುಗೊಳಿಸುವ ಸರ್ಕಾರದ ನೀತಿ ಖಂಡನೀಯ ಎಂದು ಮನವಿಯಲ್ಲಿ ಹೇಳಲಾಗಿದೆ.

ಹೊಸ ಕಾಯ್ದೆ ಅನುಷ್ಠಾನ­ಗೊಂಡರೆ ಈಗ ಸರ್ಕಾರಿ ಕೋಟಾದಲ್ಲಿ­ರುವ ಎಂಜಿನಿಯರಿಂಗ್‌ನ 45 ಶೇಕಡಾ. ವೈದ್ಯಕೀಯದ 40 ಶೇಕಡಾ ಮತ್ತು ದಂತ ವೈದ್ಯಕೀಯದ 35 ಶೇಕಡಾ ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿವೆ. ಖಾಸಗಿ ಅನು­ದಾನಿತ ಕಾಲೇಜುಗಳಲ್ಲಂತೂ ಒಂದು ಸರ್ಕಾರಿ ಸೀಟು ಕೂಡ ಇಲ್ಲದಂತಾ­ಗಲಿದೆ.

ಈಗಾಗಲೇ ಸಾಕಷ್ಟು ದೂರು­ಗಳು ಕೇಳಿಬಂದಿರುವ ಕಾಮೆಡ್‌–ಕೆಗೆ ಉಳಿದ ಸೀಟುಗಳಿಗೂ ಪರೀಕ್ಷೆ ನಡೆಸಲು ಸರ್ಕಾರ ಅನುಮತಿ ನೀಡುವು­ದರಿಂದ ಅನೇಕ ಸಮಸ್ಯೆಗಳು ಸೃಷ್ಟಿಯಾಗಲಿವೆ. ಖಾಸಗಿ ಸಂಸ್ಥೆಗಳಿಗೆ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡಲು ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ದೂರಲಾಗಿದೆ.

ವಿದ್ಯಾರ್ಥಿ ವಿರೋಧಿಯಾದ ಈ ನೀತಿಯನ್ನು ಜಾರಿಗೊಳಿಸುವುದರಿಂದ ಸರ್ಕಾರ ತಕ್ಷಣ ಹಿಂದೆ
ಸರಿಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT