ಶಿಡ್ಲಘಟ್ಟ: ಸಿಇಟಿ ಶುಲ್ಕ ಏರಿಕೆ ಹಾಗೂ ಕಾಮೆಡ್– ಕೆ ಪರವಾಗಿ ನೀತಿ ರೂಪಿಸುತ್ತಿರುವ ಕ್ರಮಗಳನ್ನು ಕೈಬಿಡಬೇಕು. ಸರ್ಕಾರ ವಿದ್ಯಾರ್ಥಿ ಪರ ನಿಲುವು ತಳೆಯಬೇಕು ಎಂದು ಒತ್ತಾಯಿಸಿ ಎಸ್ಎಫ್ಐ ನೇತೃತ್ವದಲ್ಲಿ ಸೋಮವಾರ ವಿದ್ಯಾರ್ಥಿಗಳು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದರು.
ಸರ್ಕಾರ ಬಡವರ ಪರವಾಗಿ ನೀತಿ ರೂಪಿಸಬೇಕು. ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆಯ ಅನುಷ್ಠಾನದಿಂದ ಖಾಸಗಿ ಶಾಲೆಗಳಿಗೆ ಅನುಕೂಲವಾಗಲಿದೆ. ಇದು ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಆಸೆ ಕಸಿಯುವ ಪ್ರಯತ್ನ ಎಂದು ಆರೋಪಿಸಿದರು.
ಕಾಯ್ದೆಯ ಪ್ರಕಾರ ಮುಂದಿನ ಶೈಕ್ಷಣಿಕ ವರ್ಷದಿಂದ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಅಡಿ ಸೀಟ್ ಲಭ್ಯವಿರುವುದಿಲ್ಲ. ಲಕ್ಷಾಂತರ ರೂಪಾಯಿ ಕ್ಯಾಪಿಟೇಷನ್ ಶುಲ್ಕ ತೆರಲು ಸಾಮರ್ಥ್ಯ ಇಲ್ಲದ ಬಡವರು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಎಸ್ಎಫ್ಐ ಜಿಲ್ಲಾ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ಮುಖಂಡರಾದ ಮಂಜುನಾಥ, ಶ್ರೀಧರ್, ಲಕ್ಷ್ಮೀ, ಭವ್ಯಾ ಇತರರು ಪಾಲ್ಗೊಂಡಿದ್ದರು.