ಯಲ್ಲಾಪುರ: ಹುಬ್ಬಳ್ಳಿ –ಅಂಕೋಲಾ ರೈಲ್ವೆ ಮಾರ್ಗದ ಕುರಿತು ಸಮೀಕ್ಷೆ ನಡೆಸಲು ಆಗಮಿಸಿದ ಕೇಂದ್ರ ಉನ್ನತಾಧಿಕಾರಿಗಳ ಸಮಿತಿಯ ತಂಡ (ಸಿಇಸಿ) ತಾಲ್ಲೂಕಿನಲ್ಲಿ ಉದ್ದೇಶಿತ ರೈಲ್ವೆ ಮಾರ್ಗದ ಅನೇಕ ಸ್ಥಳಗಳಲ್ಲಿ ಪರಿಶೀಲನೆ ನಡೆಸಿತು.
ರೈಲ್ವೆ ಮಾರ್ಗದ ನಕಾಶೆ ಹಾಗೂ ಜಿಪಿಎಸ್ ಆಧಾರದಿಂದ ತಾಲ್ಲೂಕಿನ ಜೋಗಿಕೊಪ್ಪ, ಡೊಮಗೇರಿ, ಪಟ್ಟಣದ ರೈಲ್ವೆ ನಿಲ್ದಾಣ ನಿರ್ಮಿಸಲು ಉದ್ದೇಶಿಸಿದ ನಾರಾಯಣಪುರ ಹಾಗೂ ಇಡಗುಂದಿಯ ಚಿನ್ನಾಪುರ ಬೀರಗದ್ದೆ ಪ್ರದೇಶಗಳಲ್ಲಿ ಸರ್ವೇ ನಡೆಸಿದ ಸಿಇಸಿ ಅಧ್ಯಕ್ಷ ಪಿ.ವಿ. ಜಯಕೃಷ್ಣನ್ ತಂಡವು ನಂತರ ಅಂಕೋಲಾ ತಾಲ್ಲೂಕಿಗೆ ಪ್ರಯಾಣ ಬೆಳೆಸಿತು.
ಉನ್ನತ ಅಧಿಕಾರಿಗಳಿದ್ದ ತಂಡದಲ್ಲಿ ಸದಸ್ಯ ಕಾರ್ಯದರ್ಶಿ ಎಂ.ಕೆ. ಜೀವರಾಜನ್, ಸದಸ್ಯರಾದ ಮಹೇಂದ್ರ ವ್ಯಾಸ, ಎಂ.ಕೆ.ಮುತ್ತು, ಮೂಲಸೌಕರ್ಯಗಳ ಪ್ರಿನ್ಸಿಪಲ್ ಸೆಕ್ರೆಟರಿ ವಂದಿತಾ ಶರ್ಮಾ ಇವರ ಜೊತೆಯಲ್ಲಿ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದೀಪಕ್ ಶರ್ಮಾ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಯರಾಮ್, ಕೆನರಾ ಸಿಸಿಎಫ್ ಶಾಂತಕುಮಾರ, ಯಲ್ಲಾಪುರ ವೃತ್ತ ಹಂಗಾಮಿ ಡಿಸಿಎಫ್ ರವಿಶಂಕರ, ಕಾರವಾರ ಡಿಸಿಎಫ್ ಹೀರಾಲಾಲ್, ಯಲ್ಲಾಪುರ, ಮಂಚಿಕೇರಿ, ಅಂಕೋಲಾ ಎಸಿಎಫ್ ಹಾಗೂ ಯಲ್ಲಾಪುರ, ಇಡಗುಂದಿ, ಕಿರವತ್ತಿ ಆರ್ಎಫ್ಒ ಉಪಸ್ಥಿತರಿದ್ದು ವಿವರ ನೀಡಿದರು.