ಲಖನೌ (ಪಿಟಿಐ): ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಆಶ್ಚರ್ಯಕರ ಫಲಿತಾಂಶ ಹೊರಬರಲಿದ್ದು ಬಿಜೆಪಿಗೆ ಜನಾದೇಶ ದೊರೆಯುವ ಸಾಧ್ಯತೆಗಳಿವೆ ಎಂದು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಕಲ್ರಾಜ್ ಮಿಶ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸಂಸದೀಯ ಮಂಡಳಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಲಿದೆ ಎಂದು ಅವರು ಹೇಳಿದ್ದಾರೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸೂರ್ಯಪ್ರತಾಪ್ ಶಾಹಿ, ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್, ಉಮಾಭಾರತಿ ಮತ್ತು ಕಲ್ರಾಜ್ ಮಿಶ್ರಾ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಈಚೆಗೆ ಘೋಷಿಸಿದ್ದರು. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಮಿಶ್ರಾ ಅವರ ಹೇಳಿಕೆ ಅನೇಕ ರಾಜಕೀಯ ಲೆಕ್ಕಾಚಾರಗಳಿಗೆ ಎಡೆಮಾಡಿಕೊಟ್ಟಿದೆ.
ಉಮಾಭಾರತಿ ಹೊರಗಿನವರು, ರಾಷ್ಟ್ರ ರಾಜಕಾರಣದಲ್ಲಿರುವ ರಾಜನಾಥ್ ಸಿಂಗ್ ರಾಜ್ಯ ರಾಜಕೀಯಕ್ಕೆ ಮರಳಿ ಬರಲಾರೆ ಎಂದು ಈಗಾಗಲೇ ಹೇಳಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿರುವುದು ತಾವೇ ಎಂಬ ಲೆಕ್ಕಾಚಾರ ಮಿಶ್ರಾ ಅವರದ್ದಾಗಿದೆ.
ಉಮಾ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿದ್ದು, ಮುಖ್ಯಮಂತ್ರಿಯಾಗಲಾರರು ಎನ್ನುವುದು ಮಿಶ್ರಾ ಅವರ ನಂಬಿಕೆ. ಉತ್ತರ ಪ್ರದೇಶಕ್ಕೆ ಮಾತ್ರ ಅವರನ್ನು ಸೀಮಿತಗೊಳಿಸಲಾಗದು ಎಂದು ಅವರು ಹೇಳಿರುವುದು ಇದನ್ನು ಸಮರ್ಥಿಸಿದೆ.
ಲಖನೌದಿಂದ ಸ್ಪರ್ಧಿಸಿರುವ ಅವರು ತಮ್ಮ ಈ ಲೆಕ್ಕಾಚಾರವನ್ನು ಅಲ್ಲಲ್ಲಿ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.