ವಿಟ್ಲ: ‘ಎಚ್.ಡಿ. ದೇವೇಗೌಡ, ಎಸ್.ಎಂ. ಕೃಷ್ಣ, ಎಚ್.ಡಿ. ಕುಮಾರಸ್ವಾಮಿ ರಾಜ್ಯದಲ್ಲಿ ಹಗರಣಗಳ ಖಜಾನೆಗಳು. ಅವರೆದುರು ನಮ್ಮ ಯಡಿಯೂರಪ್ಪನವರ ಭೂಹಗರಣ ಲೆಕ್ಕಕ್ಕಿಲ್ಲದ್ದು. ಮುಖ್ಯಮಂತ್ರಿ ಅವರಿಂದ ತಪ್ಪಾಗಿದ್ದರೆ ಅದನ್ನು ತಿದ್ದಿಕೊಂಡು ಅಭಿವೃದ್ಧಿ ಕೆಲಸ ಮಾಡಲು ಕಟಿಬದ್ಧರಾಗಿದ್ದಾರೆ’ಹೀಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾರ್ಯವೈಖರಿಗೆ ಬೆಂಬಲ ನೀಡಿದವರು ಪುತ್ತೂರು ಶಾಸಕಿ ಮಲ್ಲಿಕಾಪ್ರಸಾದ್.
ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕ ಅನುದಾನಿತ ಶಾಲೆಯಲ್ಲಿ ಭಾನುವಾರ ಸಂಜೆ ಮತದಾರ ಅಭಿನಂದನಾ ಸಭೆಯಲ್ಲಿ ಮುಖ್ಯ ಅವರು ಅತಿಥಿಯಾಗಿ ಮಾತನಾಡಿದರು. ಜನರ ಆಶೀರ್ವಾದದ ಮೂಲಕ ಆಡಳಿತದ ಚುಕ್ಕಾಣಿ ಹಿಡಿದು ಅಭಿವೃದ್ಧಿ ಕೆಲಸ ಮಾಡುತ್ತಿರುವ ರಾಜ್ಯ ಸರ್ಕಾರವನ್ನು ರಾಜ್ಯಪಾಲರ ಮೂಲಕ ಇಕ್ಕಟ್ಟಿಗೆ ಸಿಲುಕಿಸುವ ಯಾವುದೇ ರಾಜಕೀಯ ಷಡ್ಯಂತ್ರಗಳಿಗೆ ಜಗ್ಗುವುದಿಲ್ಲ. ಅವರು ಎಸೆಯುವ ಪ್ರತಿಯೊಂದು ಅಸ್ತ್ರಗಳನ್ನು ಸವಾಲಾಗಿ ಸ್ವೀಕರಿಸಿ ಅಭಿವೃದ್ಧಿಯ ಮೂಲಕವೇ ಉತ್ತರ ನೀಡುತ್ತೇವೆ ಎಂದರು.
ದ.ಕ ಜಿಲ್ಲೆ ಬಿಜೆಪಿಯ ಭದ್ರ ಕೋಟೆಯಾಗಿದ್ದು ಪಕ್ಷದ ಕಾರ್ಯಕರ್ತರ ಶ್ರಮದಿಂದ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆದ್ದಿದ್ದಾರೆ. ಗೆದ್ದ ಅಭ್ಯರ್ಥಿಗಳು ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಕೊಡಬೇಕಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ತಿಳಿಸಿದರು.
ಜಿಲ್ಲಾ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು ಸಹ ಮಾತನಾಡಿದರು.
ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಗೋಪಾಕೃಷ್ಣ ಹೇರಳೆ ಅಧ್ಯಕ್ಷತೆ ವಹಿಸಿದ್ದರು.ಪುತ್ತೂರಿನ ವೈದ್ಯ ಡಾ.ಪ್ರಸಾದ್ ಭಂಡಾರಿ, ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ರಾಜೀವ ಭಂಡಾರಿ, ಮಾಣಿ ಜಿ.ಪಂ. ಸದಸ್ಯ ಚೆನ್ನಪ್ಪ ಕೋಟ್ಯಾನ್, ವಿಟ್ಲ ಜಿ.ಪಂ.ಸದಸ್ಯೆ ಶೈಲಜಾ ಭಟ್, ಪುಣಚ ತಾ.ಪಂ.ಸದಸ್ಯ ಹರಿಕೃಷ್ಣ ಶೆಟ್ಟಿ, ಪುಣಚ ಗ್ರಾ. ಪಂ. ಅಧ್ಯಕ್ಷೆ ಪವಿತ್ರಾ ನಾಯಕ್, ಕೇಪು ಶಕ್ತಿಕೇಂದ್ರದ ಅಧ್ಯಕ್ಷ ಕಟ್ಟೆ ಬಾಲಚಂದ್ರ ನಾಯಕ್ ಉಪಸ್ಥಿತರಿದ್ದರು.ಗ್ರಾ.ಪಂ.ಉಪಾಧ್ಯಕ್ಷ ರಾಮಕೃಷ್ಣ ಮೂಡಂಬೈಲು, ಪಂ.ಸದಸ್ಯ ಉದಯಕುಮಾರ್ ದಂಬೆ, ಜಯರಾಮ ರೈ ಮಾಡಂಬೈಲು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.