ಬೆಂಗಳೂರು: ಚಳಿ-ಜ್ವರ ಮತ್ತು ಹೊಟ್ಟೆ ನೋವಿನಿಂದ ಬಳಲಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಶುಕ್ರವಾರ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
ಕೆಂಗಲ್ ಹನುಮಂತಯ್ಯ ಜಯಂತಿ; ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಬಗೆಗಿನ ಅಂತರರಾಷ್ಟ್ರೀಯ ಸಮ್ಮೇಳನದ ನಂತರ ನೇರ ಬೌರಿಂಗ್ ಆಸ್ಪತ್ರೆಗೆ ತೆರಳಿ, ಅರ್ಧ ಗಂಟೆ ಆಸ್ಪತ್ರೆಯಲ್ಲೇ ಇದ್ದು ತಪಾಸಣೆಗೆ ಒಳಗಾದರು.
ಗುರುವಾರ ಇದ್ದ ಜ್ವರ ಶುಕ್ರವಾರವೂ ಮುಂದುವರಿದು ಚಿಕಿತ್ಸೆ ಪಡೆಯಲಾಗಿದೆ. ಹೊಟ್ಟೆ ನೋವು ಕಾಣಿಸಿದ್ದರಿಂದ ಸಿ.ಟಿ.ಸ್ಕ್ಯಾನ್ ಮಾಡಿದ್ದು, ಯಾವುದೇ ಅಪಾಯ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.
ಕೆಲಸದ ಒತ್ತಡದಿಂದ ಹೀಗಾಗಿದ್ದು, ಎರಡು ದಿನ ವಿಶ್ರಾಂತಿ ಪಡೆಯಲು ಬೌರಿಂಗ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಸತೀಶ್ಚಂದ್ರ ಸಲಹೆ ಮಾಡಿದ್ದಾರೆ. ಆಸ್ಪತ್ರೆಯಿಂದ ನೇರಅಧಿಕೃತ ನಿವಾಸ `ಅನುಗ್ರಹ~ಕ್ಕೆ ತೆರಳಿದ ಗೌಡರು ಇಡೀ ದಿನ ವಿಶ್ರಾಂತಿ ಪಡೆದರು. ಸಾರ್ವಜನಿಕರ ಭೇಟಿ ರದ್ದುಪಡಿಸಿದರು. ಶನಿವಾರವೂ ವಿಶ್ರಾಂತಿ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.