ನವದೆಹಲಿ (ಪಿಟಿಐ): ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿನ ಅವ್ಯವಹಾರ ಕುರಿತು ಲೆಕ್ಕ ಪರಿಶೋಧನೆ ನಡೆಸುವ ಮಹಾಲೇಖಪಾಲರ (ಸಿಎಜಿ)ಅಧಿಕಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್ , `ಸಿಎಜಿ ಅವರು ಸಾಂವಿಧಾನಿಕ ಅಧಿಕಾರ ಹೊಂದಿದವರೇ ಹೊರತೂ ಅವರೊಬ್ಬ ಲೆಕ್ಕ ಪರಿಶೋಧಕ~ ಅಲ್ಲ ಎಂದು ಸ್ಪಷ್ಟಪಡಿಸಿತು.
`ಸಿಎಜಿ ಅವರು ಕೇವಲ ಲೆಕ್ಕ ಪರಿಶೋಧಕರಲ್ಲ, ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ಆದಾಯ ಹಂಚಿಕೆ ಕುರಿತು ಪರಿಶೀಲನೆ ನಡೆಸುವ ಸಾಂವಿಧಾನಿಕ ಅಧಿಕಾರ ಹೊಂದಿದವರಾಗಿದ್ದಾರೆ~ ಎಂದು ನ್ಯಾಯಮೂರ್ತಿಗಳಾದ ಆರ್. ಎಂ. ಲೋಧಾ ಮತ್ತು ಎ. ಆರ್. ದವೆ ಅವರನ್ನೊಳಗೊಂಡ ವಿಭಾಗೀಯ ಪೀಠ ತಿಳಿಸಿದೆ.
ಸಿಎಜಿ ವರದಿಯನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ಸಂಸತ್ತು ಮಾತ್ರ ಹೊಂದಿದೆ ಎಂದೂ ಪೀಠ ಇದೇ ಸಂದರ್ಭದಲ್ಲಿ ತಿಳಿಸಿದೆ.