ದೇಶದ ಚಾಲ್ತಿ ಖಾತೆ ಕೊರತೆಯು (ಸಿಎಡಿ) ಗಮನಾರ್ಹವಾಗಿ ಕಡಿಮೆಯಾಗಿರುವುದು ಸದ್ಯದ ನಿರಾಶಾದಾಯಕ ಆರ್ಥಿಕ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಬೆಳವಣಿಗೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಮೊದಲ ತ್ರೈಮಾಸಿಕದಲ್ಲಿ 2,100 ಕೋಟಿ ಡಾಲರ್ಗಳಷ್ಟಿದ್ದ (ರೂ.1,30,200 ಕೋಟಿ) ಚಾಲ್ತಿ ಖಾತೆ ಕೊರತೆಯು ಈಗ 520 ಕೋಟಿ ಡಾಲರ್ಗಳಿಗೆ (ರೂ.32,240 ಕೋಟಿಗೆ) ತಲುಪಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಇದು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 4.9ರಿಂದ ಶೇ 1.2ಕ್ಕೆ ಇಳಿದಿರುವುದರ ದ್ಯೋತಕವೂ ಆಗಿದೆ. ವಿದೇಶಿ ವಿನಿಮಯದ ಒಳಹರಿವು ಮತ್ತು ಹೊರ ಹರಿವಿನ ಅಂತರ ಇದಾಗಿದೆ. ಈ ಗಮನಾರ್ಹ ಎನ್ನಬಹುದಾದ ಸುಧಾರಣೆಗೆ ವ್ಯಾಪಾರ ಕೊರತೆಯಲ್ಲಿನ ತೀವ್ರ ಕುಸಿತವೂ ನೆರವಾಗಿದೆ. ಡಾಲರ್ ಎದುರು ರೂಪಾಯಿ ಅಪಮೌಲ್ಯಗೊಂಡ ನಂತರ ರಫ್ತು ವಹಿವಾಟು ಸಾಕಷ್ಟು ಏರಿಕೆ ಕಂಡಿದೆ. ಜತೆಗೆ ಆಮದು ವಹಿವಾಟೂ ಕಡಿಮೆಯಾಗಿದೆ. ಪಾವತಿ ಸಮತೋಲನ ಪರಿಸ್ಥಿತಿಯಲ್ಲಿಯೂ ಸುಧಾರಣೆ ಕಂಡು ಬಂದಿದೆ.
ಆರ್ಬಿಐ ಕೈಗೊಂಡ ಕೆಲ ಕ್ರಮಗಳು ಕೂಡ ಮೂರು ತಿಂಗಳ ಹಿಂದಿನ ದಿಗಿಲು ಮೂಡಿಸುವಂತಹ ಮತ್ತು ಅನಿಶ್ಚಿತ ಪರಿಸ್ಥಿತಿಯಿಂದ ದೇಶಿ ಅರ್ಥ ವ್ಯವಸ್ಥೆಯನ್ನು ಪಾರು ಮಾಡುವಲ್ಲಿ ಸಫಲವಾಗಿವೆ. ಅರ್ಥ ವ್ಯವಸ್ಥೆಯ ಎಲ್ಲ ವಲಯಗಳಲ್ಲಿ ಸುಧಾರಣೆ ಕಾಣುತ್ತಿರುವುದು ಚೇತರಿಕೆಯ ಲಕ್ಷಣವಾಗಿದೆ ಎಂದು ಹಣಕಾಸು ಸಚಿವಾಲಯವೂ ಭರವಸೆಯ ಮಾತನ್ನಾಡಿದೆ. ಆದರೆ, ಇಂತಹ ತೀರ್ಮಾನಕ್ಕೆ ಬರುವುದು ಸದ್ಯದ ಸಂದರ್ಭದಲ್ಲಿ ಅವಸರದ ನಿಲುವಾಗುತ್ತದೆ.
ವಾಸ್ತವದಲ್ಲಿ ಇದೊಂದು ನಮ್ಮಷ್ಟಕ್ಕೆ ನಾವೇ ಸಂತುಷ್ಟಪಡುವಂತಹ ಪರಿಸ್ಥಿತಿಯಾಗಿದ್ದು, ಕಳವಳಕಾರಿ ಸಂಗತಿಗಳು ಸಾಕಷ್ಟಿವೆ. ವಿದೇಶಿ ವಿನಿಮಯ ಮೀಸಲು ಸಂಗ್ರಹ ಈಗಲೂ ಕೆಳಮಟ್ಟದಲ್ಲಿಯೇ ಇದೆ. ಸರಕು - ಸೇವೆಗಳ ಆಮದು ಪ್ರಮಾಣವು ಹೆಚ್ಚುತ್ತಿರುವುದು ವ್ಯಾಪಾರ ಕೊರತೆ ಇನ್ನಷ್ಟು ಹೆಚ್ಚಲು ಕಾರಣವಾಗಬಹುದು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೇಶಿ ಹಣಕಾಸು ಮಾರುಕಟ್ಟೆಯಿಂದ ಹಣ ವಾಪಸ್ ಪಡೆಯುತ್ತಿರುವ ಪ್ರವೃತ್ತಿಯಲ್ಲಿನ ಏರುಪೇರು ಮುಂದುವರಿದಿದೆ. ದೇಶದ ಒಳಗೆ ವಿದೇಶಿ ಬಂಡವಾಳವು ದೀರ್ಘಕಾಲದವರೆಗೆ ನಿರಂತರವಾಗಿ ಹರಿದು ಬರುವುದನ್ನು ಉತ್ತೇಜಿಸಲು ಸೂಕ್ತ ನೀತಿ ನಿಯಮ ಮತ್ತು ಪ್ರೋತ್ಸಾಹ ನೀಡುವ ಇನ್ನಷ್ಟು ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಾಗಿದೆ. ಚಿನ್ನದ ಆಮದು ಪ್ರಮಾಣವು ಆತಂಕಕಾರಿ ಎನ್ನುವ ಪ್ರಮಾಣದಲ್ಲಿ (ಶೇ 25ರಷ್ಟು) ಕಡಿಮೆಯಾಗಿರುವುದು ಈಗ ಇನ್ನೊಂದು ಕಳವಳಕಾರಿ ವಿದ್ಯಮಾನವಾಗಿದೆ.
ಸಿಎಡಿ ಕಡಿಮೆಯಾಗಲು ಇದೂ ಒಂದು ಪ್ರಮುಖ ಕಾರಣವಾಗಿದೆ. ಕೇಂದ್ರ ಸರ್ಕಾರ ಮತ್ತು ಆರ್ಬಿಐ ಕೈಗೊಂಡ ಕಠಿಣ ಕ್ರಮಗಳು ಚಿನ್ನದ ಆಮದು ಪ್ರಮಾಣ ನಿರ್ಬಂಧಿಸಲು ನೆರವಾಗಿವೆ. ಆಮದು ಮೇಲೆ ಮಿತಿ ವಿಧಿಸಿದ್ದರೂ ದೇಶದಲ್ಲಿ ಚಿನ್ನದ ಬೇಡಿಕೆಗೇನೂ ಕೊರತೆ ಉಂಟಾಗಿಲ್ಲ. ಬದಲಿಗೆ ಚಿನ್ನದ ಕಳ್ಳ ಸಾಗಣೆ ಮಾತ್ರ ಗಮನಾರ್ಹವಾಗಿ ಹೆಚ್ಚಾಗಿದೆ.
ಕಾನೂನುಬದ್ಧವಾಗಿ ಗರಿಷ್ಠ ಪ್ರಮಾಣದ ಚಿನ್ನ ಆಮದು ಮಾಡಿಕೊಳ್ಳುವುದರಿಂದ ಆಗುವ ಹಾನಿಗಿಂತ ಅಕ್ರಮವಾಗಿ ಹರಿದು ಬರುವ ಚಿನ್ನ ಹೆಚ್ಚು ಅಪಾಯಕಾರಿ. ಈ ಪರಿಸ್ಥಿತಿಯನ್ನೂ ಆರ್ಬಿಐ ಸೂಕ್ತವಾಗಿ ನಿಭಾಯಿಸಲು ಮುಂದಾದರೆ ಮಾತ್ರ, ಸಿಎಡಿ ಕಡಿಮೆಯಾಗಿರುವುದಕ್ಕೆ ಸಮಾಧಾನದ ನಿಟ್ಟುಸಿರು ಬಿಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.