ಬೆಂಗಳೂರು: ಕೆಪಿಎಸ್ಸಿ ಅಕ್ರಮಗಳ ಕುರಿತು ತನಿಖೆ ನಡೆಸಿರುವ ಸಿಐಡಿ ಬಗ್ಗೆ ಸಂಶಯ ಮೂಡುವ ರೀತಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆ ಶೋಭೆ ತರುವುದಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ. ಬಿ.ಕೆ. ಚಂದ್ರಶೇಖರ್ ಹೇಳಿದ್ದಾರೆ.
‘ಸಿಐಡಿಯಲ್ಲಿರುವವರು ಸತ್ಯಹರಿ ಶ್ಚಂದ್ರರೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಅಲ್ಲದೆ ಒಂದು ಜಾತಿಯ ವಿರುದ್ಧ ತನಿಖೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಸಿಐಡಿ ತನಿಖೆಯನ್ನು ಯಾವುದೇ ಜಾತಿಯನ್ನು ಗುರಿಯಾಗಿ ರಿಸಿಕೊಂಡು ಮಾಡಿಲ್ಲ. ದೊಡ್ಡ ಸ್ಥಾನದಲ್ಲಿರುವ ನಾಯಕರು ಇಂತಹ ಹೇಳಿಕೆ ನೀಡುವುದು ಸಲ್ಲದು’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಎಚ್.ಎನ್. ಕೃಷ್ಣ ಕೆಪಿಎಸ್ಸಿ ಅಧ್ಯಕ್ಷರಾಗಿದ್ದಾಗ ಏನೇನು ಮಾಡ ಬಾರದು ಅದನ್ನೆಲ್ಲ ಮಾಡಿದರು. ಮೀಸಲಾತಿ ಸೀಟುಗಳನ್ನು ಸಾಮಾನ್ಯ ವರ್ಗಕ್ಕೆ ವರ್ಗಾಯಿಸಿ ಹಿಂದುಳಿದ ಮತ್ತು ಶೋಷಿತ ವರ್ಗಗಳ ಸಮು ದಾಯಕ್ಕೆ ಅನ್ಯಾಯ ಮಾಡಿದರು. ಈ ಬಗ್ಗೆ ತನಿಖೆ ಕೈಗೊಂಡ ಸಿಐಡಿ ಸಮಗ್ರ ವರದಿ ನೀಡಿದೆ. ಇಂತಹ ಅನ್ಯಾಯಗಳು ನಡೆಯುತ್ತಿದ್ದಾಗ ಎಚ್.ಡಿ. ಕುಮಾರ ಸ್ವಾಮಿ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. ಕೆಪಿಎಸ್ಸಿ ಅಕ್ರಮಗಳ ಬಗ್ಗೆ ಸಿಐಡಿ ವರದಿ ನೀಡಿರುವಾಗ ಹೈಕೋರ್ಟ್ ನಿಂದ ಮತ್ತೊಂದು ಸಮಿತಿ ರಚಿಸುವ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಹೊಸ ನೇಮಕಾತಿ ಕೈಗೊಳ್ಳಲಿ: ಹಲವು ಯುವಕರ ವಯಸ್ಸು ಮೀರುತ್ತಿರುವುದ ರಿಂದ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗೆ ಕೆಪಿಎಸ್ಸಿ ತಕ್ಷಣ ಚಾಲನೆ ನೀಡಬೇಕು. ಕಳೆದ ಎರಡು ವರ್ಷ ಗಳಿಂದ ನೇಮಕಾತಿ ನಡೆದಿಲ್ಲ ಎಂದು ತಿಳಿಸಿದರು. ಮುಖ್ಯ ಶಿಕ್ಷಕರ ಹುದ್ದೆಗೆ ಈಗಾಗಲೇ 61 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಆದರೆ, ಇದುವರೆಗೆ ನೇಮಕಾತಿ ಆದೇಶ ನೀಡಿಲ್ಲ. ಸರ್ಕಾರ ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.