ಗ್ಯಾಂಗ್ಟಕ್ (ಐಎಎನ್ಎಸ್): ಭೂಕಂಪದಿಂದ ಹಾನಿಗೀಡಾಗಿರುವ ಸಿಕ್ಕಿಂಗೆ ಒಂದು ಸಾವಿರ ಕೋಟಿ ರೂಪಾಯಿಗಳ ಅನುದಾನ ನೀಡುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ಪ್ರಕಟಿಸಿದ್ದಾರೆ.
ಪ್ರಕೃತಿ ವಿಕೋಪದ ಬಳಿಕ ಉಂಟಾಗಿರುವ ಪರಿಸ್ಥಿತಿ ಎದುರಿಸಲು ಬೇಕಾಗಿರುವ ಎಲ್ಲ ನೆರವನ್ನೂ ಕೇಂದ್ರ ಸರ್ಕಾರ ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಗ್ಯಾಂಗ್ಟಕ್ನಲ್ಲಿ ಸಿಂಗ್ ಅವರು ಮುಖ್ಯಮಂತ್ರಿ ಪವನ್ಕುಮಾರ ಚಾಮ್ಲಿಂಗ್ ಅವರೊಂದಿಗೆ ನಡೆಸಿದ ಸಭೆಯಲ್ಲಿ ಈ ಘೋಷಣೆ ಹೊರ ಬಿದ್ದಿದೆ.
ಪ್ರಧಾನಿ ಸಿಂಗ್ ಅವರು ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ನಲ್ಲಿ ಭೂಕಂಪದಿಂದ ತೀವ್ರ ಹಾನಿಗೀಡಾಗಿರುವ ಸಿಕ್ಕಿಂನ ಲಾಚುಂಗ್, ಲಾಚೆನ್, ಚುಂಗ್ತಾಂಗ್ ಮತ್ತು ಡಿಜೊಂಗ್ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.
ಬಳಿಕ ಮಾತನಾಡಿದ ಪ್ರಧಾನಿ ಸಿಂಗ್ ಅವರು, ಪರಿಹಾರ ಕಾರ್ಯಗಳಿಗಾಗಿ ಕೇಂದ್ರದಿಂದ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗುವುದು ಜೊತೆಗೆ ಸಿಕ್ಕಿಂ ಪುನರ್ ನಿರ್ಮಾಣಕ್ಕಾಗಿ ಬೇಕಾಗುವ ಎಲ್ಲಾ ನೆರವನ್ನು ಕೇಂದ್ರ ನೀಡಲಿದೆ ಎಂದು ನುಡಿದರು.
ಘಟನೆಯಲ್ಲಿ ಗಾಯಗೊಂಡು ಸಿಕ್ಕಿಂ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಪ್ರಧಾನಿ ಭೇಟಿಯಾಗಿ ಸಾಂತ್ವನ ಹೇಳಿದರು.
ಇದೇ ಸಂದರ್ಭದಲ್ಲಿ ಗಾಯಾಳು ವ್ಯಕ್ತಿಯೊಬ್ಬರ ಪ್ಲಾಸ್ಟರ್ ಮಾಡಲಾಗಿದ್ದ ಕೈ ಮೇಲೆ ಸಹಿ ಮಾಡಿ ಶೀಘ್ರ ಗುಣಮುಖವಾಗಲಿ ಎಂದು ಹಾರೈಸಿದರು.
ಭೂಕಂಪದ ತೀವ್ರ ಹಾನಿಯ ಬಗ್ಗೆ ಪ್ರಧಾನಿಗೆ ಸ್ಲೈಡ್ಗಳ ಮೂಲಕ ತೋರಿಸಲಾಯಿತು. ಸೆಪ್ಟೆಂಬರ್ 18ರಂದು ಸಂಭವಿಸಿದ ಭೂಕಂಪದಲ್ಲಿ 90 ಜನರು ಮೃತಪಟ್ಟಿದ್ದರು.