ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಕಿಮ್ಸ ಸ್ನೈಪರ್ನ ದೇಸಿ ಕ್ರೀಡಾ ಪ್ರೇಮ

Last Updated 21 ಮೇ 2012, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಫುಟ್‌ಬಾಲ್ ಆಟಕ್ಕೆ ಅವಕಾಶಗಳು ಸೀಮಿತ ಎಂಬುದನ್ನು ಅರಿತೇ ಅವರು ದೂರದ ಇಂಗ್ಲೆಂಡ್‌ಗೆ ತೆರಳಿದ್ದು. ಮ್ಯಾಂಚೆಸ್ಟರ್‌ನಲ್ಲಿ ಮೂರು ವರ್ಷ ಗುತ್ತಿಗೆ ಆಧಾರದ ಮೇಲೆ ಆಟವಾಡಿ ತಮ್ಮ ಸಾಮರ್ಥ್ಯ ರುಜುವಾತು ಪಡಿಸಿದ ಬೈಚುಂಗ್ ಭುಟಿಯಾ, ಯುರೋಪ್ ಖಂಡದಲ್ಲಿ ವೃತ್ತಿಪರ ಫುಟ್‌ಬಾಲ್ ಆಡಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದವರು.

ಅಲ್ಲಿಂದ ಭಾರತಕ್ಕೆ ಮರಳಿದ ಮೇಲೆ ಅವರಿಗೆ ಉತ್ತಮ ಅವಕಾಶಗಳು ಸಿಕ್ಕವು. `ಸಿಕ್ಕಿಮ್ಸ ಸ್ನೈಪರ್~ ಎಂದು ಕರೆಯಿಸಿಕೊಂಡು, ಭಾರತ ಫುಟ್‌ಬಾಲ್ ತಂಡದ ನಾಯಕರಾಗಿದ್ದ ಅವರು ಐದು ತಿಂಗಳ ಹಿಂದೆಯಷ್ಟೇ ನಿವೃತ್ತಿ ಪಡೆದುಕೊಂಡರು.

ಭಾರತದ ಪರ ನೂರಕ್ಕೂ ಹೆಚ್ಚು ಪಂದ್ಯಗಳನ್ನಾಡಿದ ಭುಟಿಯಾ, ನೈಕಿ ಬ್ರಾಂಡ್ ಸಿದ್ಧಪಡಿಸಿದ `ಫಿನಿಶರ್ ಟೀ~ ಬಿಡುಗಡೆಗೆಂದು ಕಂಠೀರವ ಕ್ರೀಡಾಂಗಣಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ `ಮೆಟ್ರೊ~ದೊಂದಿಗೆ ಹಂಚಿಕೊಂಡಿದ್ದಿಷ್ಟು...

ಭಾರತ ತಂಡ ವರ್ಲ್ಡ್‌ಕಪ್‌ನಲ್ಲಿ ಆಡುವುದು ಎಂದು?
ದಿನಾಂಕ, ಗಂಟೆ ಹೇಳಲು ಸಾಧ್ಯವಿಲ್ಲ. ಆದರೆ ಅತಿ ಶೀಘ್ರದಲ್ಲಿ ಎಂದು ಮಾತ್ರ ಹೇಳಬಲ್ಲೆ. ಕಳೆದ 15 ವರ್ಷಗಳ ಫುಟ್‌ಬಾಲ್ ಇತಿಹಾಸ ಗಮನಿಸಿದರೆ ಬದಲಾವಣೆ ಆಗುತ್ತಿರುವುದು ಸ್ಪಷ್ಟವಾಗುತ್ತದೆ.

ಪ್ರಸ್ತುತ ಫುಟ್‌ಬಾಲ್ ತಂಡದ ಸಮಸ್ಯೆಗಳೇನು?
ಭಾರತ ತಂಡಕ್ಕೆ ಮೂಲಸೌಕರ್ಯಗಳ ಕೊರತೆ ಇದೆ. ಸೂಕ್ತ ಪ್ರೋತ್ಸಾಹಕರಿಲ್ಲ. ಮುತುವರ್ಜಿ ವಹಿಸಿ ಮುಂದೆ ಹೋಗುವವರಿಲ್ಲ.

ವಿದೇಶಿ ಕೋಚ್ ಆಯ್ಕೆ ಎಷ್ಟು ಸರಿ?
ಕೋಚ್‌ಗಳನ್ನು ಆಯ್ಕೆ ಮಾಡುವಾಗ ದೂರದೃಷ್ಟಿಯಿಂದ ದೀರ್ಘಕಾಲದ ಯೋಜನೆ ಹಾಕಿಕೊಳ್ಳಬೇಕು. ಒಂದು ಇಲ್ಲವೇ ಎರಡು ವರ್ಷದ ಬಾಂಡ್ ಮೇಲೆ ಆಯ್ಕೆ ಮಾಡಿದರೆ ಅವರು ತಂಡವನ್ನು, ಆಟಗಾರರನ್ನು ಸರಿಯಾಗಿ ಅರ್ಥೈಸಿಕೊಳ್ಳುವುದರಲ್ಲಿ ಸಮಯ ಮುಗಿದಿರುತ್ತದೆ. ಇಲ್ಲಿ ವಿದೇಶಿ-ಸ್ವದೇಶಿ ವ್ಯಕ್ತಿ ಎಂಬುದು ಮುಖ್ಯವಲ್ಲ. ಆತ ಎಷ್ಟು ಅರ್ಹ ಎಂಬುದಷ್ಟೇ ಇಲ್ಲಿ ಗಣನೆಗೆ ಬರುತ್ತದೆ.

ಹಿರಿಯರ ತಂಡಕ್ಕೆ ಸಿಗದ ವರ್ಲ್ಡ್‌ಕಪ್ ಅವಕಾಶ ಕಿರಿಯರಿಗೆ ಸಿಗಬಹುದೇ?
ಸಿಗಲಿ ಎಂಬುದು ನಮ್ಮ ಆಶಯ. ಸದ್ಯದ ಮಟ್ಟಿಗಂತೂ ಇದು ಸಂತಸದ ವಿಷಯ. ಭಾರತದಲ್ಲೇ ಕಿರಿಯರ ಫುಟ್‌ಬಾಲ್ ವರ್ಲ್ಡ್‌ಕಪ್ ನಡೆಯುವುದಾದರೆ ಆತಿಥೇಯರಾದ ನಾವು ಸಹಜವಾಗಿ ಆಯ್ಕೆಗೊಳ್ಳುತ್ತೇವೆ. ಅದಕ್ಕೆ ಸರಿಯಾದ ಪೂರ್ವಸಿದ್ಧತೆಯೂ ಮುಖ್ಯ.

ನಿವೃತ್ತಿ ಬಳಿಕ ಏನು ಮಾಡುತ್ತಿದ್ದೀರಿ?
ದೇಶಿ ಆಟಗಳತ್ತ ಗಮನ ಹರಿಸುತ್ತಿದ್ದೇನೆ. ಫುಟ್‌ಬಾಲ್ ಸ್ಕೂಲ್ ಕ್ಲಬ್ ಆರಂಭಿಸಿದ್ದೇನೆ. ಸಾಧ್ಯವಾದಷ್ಟು ಉತ್ತಮ ಕ್ರೀಡಾಪಟುಗಳನ್ನು ತಯಾರು ಮಾಡಬೇಕೆಂಬುದು ನನ್ನ ಉದ್ದೇಶ.

ಇಂತಹ ಕ್ಲಬ್‌ಗಳಿಂದ ಫುಟ್‌ಬಾಲ್‌ಗೆ ಜೀವ ತುಂಬಬಹುದೇ?
ಖಂಡಿತ. ಫುಟ್‌ಬಾಲ್ ಎಂದರೆ ಕೋಲ್ಕತ್ತಾ, ಗೋವಾ ರಾಜ್ಯಗಳಿಗಷ್ಟೇ ಅಲ್ಲ. ಎಲ್ಲಾ ರಾಜ್ಯಗಳಲ್ಲೂ ಫುಟ್‌ಬಾಲ್ ಕ್ಲಬ್‌ಗಳು ಆರಂಭವಾಗಬೇಕು. ಆಡುವವರಿಗೆ ಪ್ರೋತ್ಸಾಹ ಸಿಗಬೇಕು. ಹೆಚ್ಚು ತಂಡಗಳನ್ನು ಕಟ್ಟಿದಾಗಲೇ ಸ್ಪರ್ಧೆಗಳು ಹೆಚ್ಚುತ್ತವೆ.

ಆದರೆ ಇವು ಒಂದು ಇಲ್ಲವೇ ಆರು ತಿಂಗಳ ಕೋರ್ಸ್‌ಗಳಿಗಷ್ಟೇ ಸೀಮಿತವಾಗಬಾರದು. ಪ್ರಸ್ತುತ ಬೆಂಗಳೂರಿನಲ್ಲಿ ಎಚ್‌ಎಎಲ್ ನಡೆಸುತ್ತಿರುವ ಕ್ಲಬ್‌ಗೆ ಈ ಮಾತು ಅನ್ವಯಿಸುವುದು ಸ್ವಲ್ಪ ಕಷ್ಟ. ಈ ಕ್ಲಬ್‌ಗಳು ಖಾಸಗಿಯವರ ಕೈಯಲ್ಲಿದ್ದರಷ್ಟೇ ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯ ಸಿಗಲು ಸಾಧ್ಯ.
ಐಪಿಎಲ್ ಬಗ್ಗೆ...
(ನಗುತ್ತಾ) ಸಾರಿ, ನೋ ಕಮೆಂಟ್ಸ್...

ಅವರು ಬಂದಿದ್ದು...
ನೈಕಿ ಉಡುಪುಗಳ ರಾಯಭಾರಿ ಆಗಿರುವ ಭುಟಿಯಾ, ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್) ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ವರ್ಲ್ಡ್ 10ಕೆ ಓಟಕ್ಕಾಗಿ ನೈಕಿ ತಯಾರಿಸಿದ ಟಿ ಶರ್ಟ್ ಬಿಡುಗಡೆಗೆ ಆಗಮಿಸಿದ್ದರು. ಈ ಮ್ಯಾರಥಾನ್ ಮೇ 27ರಂದು ನಡೆಯಲಿದ್ದು, ಅಲ್ಲಿ ಮೊದಲ 1500 ಮಂದಿಗೆ ಉಚಿತ `ಫಿನಿಶರ್ ಟೀ~ ನೀಡಲಾಗುತ್ತದೆ. ಪ್ಲಾಸ್ಟಿಕ್ ಪುನರ್‌ಬಳಕೆಯಿಂದ ತಯಾರಿಸಿದ ಉಡುಪುಗಳು ಇವು ಎಂಬುದು ಆಯೋಜಕರ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT