ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಟಿಜೆನ್

ಅಕ್ಷರ ಗಾತ್ರ

ನಾಯಿಯ ಶಕ್ತಿ

ಕಲ್ಯಾಣಪ್ಪ ಗುರು ಆಲ್-ಹಾಲ್‌ರ ಆಶ್ರಮವನ್ನು ಸೇರಿಕೊಂಡ ಹೊತ್ತಿನಲ್ಲೇ ದೂರದೇಶದ ಮತ್ತೊಬ್ಬನೂ ಸೇರಿಕೊಂಡಿದ್ದ. ಆದರೆ ಕಲ್ಯಾಣಪ್ಪ ಸ್ನಾತಕನಾದ ಎಷ್ಟೋ ದಶಕಗಳ ನಂತರ ಆತ ಸ್ನಾತಕನಾದ. ಅದಕ್ಕೆ ಕಾರಣವಾದದ್ದು ಒಂದು ಸಣ್ಣ ಘಟನೆ. ಅದನ್ನು ಕಲ್ಯಾಣಪ್ಪನ ಸಹವರ್ತಿಗಳು ದಾಖಲಿಸಿದ್ದಾರೆ. ಆ ಕಥೆ ಈ ಕೆಳಗಿನಂತಿದೆ.

ಗುರು ಆಲ್-ಹಾಲ್ ಅವರೊಂದು ನಾಯಿಯನ್ನು ಸಾಕಿದ್ದು. ಬಿಲ್ವಿದ್ಯೆಯ ಪ್ರಾತ್ಯಕ್ಷಿಕೆ ನೀಡುವ ಸಂದರ್ಭದಲ್ಲಿ ಅದು ಗುರುಗಳ ಜೊತೆಗೇ ಇರುತ್ತಿತ್ತು. ಒಂದು ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ಗುರುಗಳು ಬಾನಾಡಿಯೊಂದರ ಮೇಲೆ ಪ್ರಯೋಗಿಸಿದ ಬಾಣ ಸರಿಯಾಗಿ ಗುರಿ ತಲುಪಿತು. ಆ ಬಾನಾಡಿ ಉರುಳಿ ಬಿದ್ದದ್ದು ಮಾತ್ರ ಸರೋವರವೊಂದರ ಮಧ್ಯೆ. ಗುರು ಆಲ್-ಹಾಲ್ ಅವರ ನಾಯಿ ನೀರಿನ ಮೇಲೆ ನಡೆದುಕೊಂಡು ಹಾಗಿ ಆ ಬಾನಾಡಿಯನ್ನು ಕಚ್ಚಿ ತಂದು ಆಲ್-ಹಾಲ್ ಅವರ ಪಾದದ ಬಳಿ ತಂದು ಹಾಕಿತು. ನಾಯಿ ನೀರಿನ ಮೇಲೆ ನಡೆಯುವುದನ್ನು ಹಲವಾರು ಬಾರಿ ಕಂಡ ಆ ದೂರದೇಶದ ವಿದ್ಯಾರ್ಥಿ ಗುರುಗಳ ಬಳಿ ಕೇಳಿಯೇ ಬಿಟ್ಟ `ನಾಯಿಯಲ್ಲಿರುವ ಶಕ್ತಿ ಯಾವುದು?~

ಗುರುಗಳು `ನಿನ್ನ ದೃಷ್ಟಿಯಲ್ಲಿ ಅದರ ವಿಶೇಷ ಶಕ್ತಿ ಯಾವುದು~ ಎಂದು ಮರು ಪ್ರಶ್ನೆ ಎಸೆದರು. ಆತ ಹೇಳಿದ `ಇದೊಂದು ಅದ್ಭುತವಾದ ನಾಯಿ. ಅದು ನೀರಿನ ಮೇಲೆ ನಡೆಯುವ ವಿದ್ಯೆಯನ್ನು ಕರಗತ ಮಾಡಿಕೊಂಡಿದೆ.~

ಗುರುಗಳು ಅವನಿಗೆ ಮೊದಲ ಪಾಠಗಳಿಂದ ಅಧ್ಯಯನ ಆರಂಭಿಸಲು ಸೂಚಿಸಿ `ನಾಯಿಯ ವಿಶೇಷತೆ ಏನು~ ಎಂಬ ಪ್ರಶ್ನೆಯನ್ನು ಕಲ್ಯಾಣಪ್ಪನ ಮುಂದಿಟ್ಟರು. ಕಲ್ಯಾಣಪ್ಪ ತಟ್ಟೆಂದು ಉತ್ತರಿಸಿದ `ದಡ್ಡ ಮುಂಡೇದಕ್ಕೆ ಈಜಲು ಬರುವುದಿಲ್ಲ...~

ಅಡಗಿ ಕುಳಿತ ದೇವರು

ದೇವರನ್ನು ಹುಡುಕಿ ದೇವಮಾನವರ ಬಳಿಯೆಲ್ಲಾ ಹೋಗಿ ನೊಂದಿದ್ದ ವಿದ್ಯಾವಂತ ಮಹಿಳೆಯೊಬ್ಬಳು ಕಲ್ಯಾಣಪ್ಪನನ್ನು ಮಂತ್ರಿ ಮಾಲ್‌ನ ಕೆಎಫ್‌ಸಿಯಲ್ಲಿ ಭೇಟಿಯಾದಳು. ಹಾಟ್ ಅಂಡ್ ಕ್ರಿಸ್ಪಿ ಚಿಕನ್ ಆಸ್ವಾದಿಸುತ್ತಾ ಕುಳಿತಿದ್ದ ಕಲ್ಯಾಣಪ್ಪನ ಬಳಿ ತನ್ನ ನೋವಿನ ಕಥೆಯನ್ನು ಹೇಳಿಕೊಂಡ ಆಕೆ `ಈ ದೇವರೇ ಹೀಗೆ... ಯಾವ ಸಾಧನೆಗೂ ಮುಂದಾಗದೆ, ಯಾವ ಆಶ್ರಮಕ್ಕೂ ಹೋಗದೇ ಇರುವವರಿಗೇ ಅವನು ಸುಲಭದಲ್ಲಿ ಸಿಗುತ್ತಾನೆ ಅನ್ನಿಸುತ್ತೆ. ಅವನನ್ನು ಹುಡುಕುವವರ ಮಟ್ಟಿಗೆ ಅವನು ಯಾವಾಗಲೂ ಅಡಗಿಕೊಂಡೇ ಇರುತ್ತಾನಲ್ಲವೇ...?~

ಕಲ್ಯಾಣಪ್ಪ `ಹೌದು... ಹೌದು... ಅಡಗಿಕೊಂಡಿದ್ದಾನೆಂಬುದು ನಿನಗೆ ಗೊತ್ತಿದೆ ಎಂದಾದರೆ ನಿನಗೆ ಅವನು ಸಿಗುವುದೇ ಇಲ್ಲ...~ ಎಂದ.

ಆಕೆ ಅಂದಿನಿಂದ ಮಾಮೂಲು ಮನುಷ್ಯರಂತೆ ಆರಾಮವಾಗಿ ಬದುಕಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT