ಅಥಣಿ: ಪಟ್ಟಣದ ಎಸ್.ಎಸ್. ರಸ್ತೆಯಲ್ಲಿರುವ ಗೆಜ್ಜಿ ಫರ್ಟಿಲೈಸರ್ಸ್ ಮಳಿಗೆಯಲ್ಲಿ ಮರಳು ಮಿಶ್ರಿತ ಗೊಬ್ಬರ ಮಾರಾಟ ಮಾಡುತ್ತಿರುವುದನ್ನು ಬುಧವಾರ ಪತ್ತೆ ಹಚ್ಚಿದ ರೈತ ಮುಖಂಡರು ಸುಮಾರು 2 ಗಂಟೆ ಮಳಿಗೆಯ ಎದುರು ಪ್ರತಿಭಟನೆ ನಡೆಸಿದರು.
ಮಂಗಳವಾರ ಈ ಮಳಿಗೆಯಲ್ಲಿ ಗೊಬ್ಬರ ಖರೀದಿಸಿದ ರೈತರಿಗೆ ಚೀಲದಲ್ಲಿ ಮರಳು ಮಿಶ್ರಣ ಮಾಡಿರುವುದು ಕಂಡು ಬಂದಿದೆ. ಇದನ್ನು ತಕ್ಷಣ ಆ ರೈತರು ಮುಖಂಡರ ಗಮನಕ್ಕೆ ತಂದಿದ್ದಾರೆ. ಕಲಬೆರಕೆ ಗೊಬ್ಬರ ಮಾರಾಟ ಮಾಡುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವ ಉದ್ದೇಶದಿಂದ ಪೂರ್ವಯೋಜಿತ ರೀತಿಯಲ್ಲಿ ಬುಧವಾರ ಬೆಳಿಗ್ಗೆ ಮಳಿಗೆಗೆ ಬಂದ ಮುಖಂಡರು ಗೊಬ್ಬರದ ಚೀಲವನ್ನು ಹಣ ನೀಡಿ ಕೊಂಡುಕೊಂಡಿದ್ದಾರೆ.
ಅದನ್ನು ಮಳಿಗೆಯ ಮಾಲೀಕರ ಎದುರಿನಲ್ಲಿಯೇ ಬಿಚ್ಚಿ ನೋಡಿದಾಗ ಗೊಬ್ಬರದ ಜೊತೆ ಮರಳು ಮಿಶ್ರಣ ಮಾಡಿರುವುದು ಕಂಡು ಬಂದಿದೆ. ಈ ವೇಳೆ ನಡೆದ ಮಾತಿನ ಚಕಮಕಿಯಲ್ಲಿ ಮಳಿಗೆಯ ಮಾಲೀಕರು ಮೊಂಡುವಾದ ಮಾಡುವ ಮೂಲಕ ರೈತ ಮುಖಂಡರನ್ನು ಸಾಗಹಾಕಲು ನೋಡಿದ್ದಾರೆ. ಆದರೆ ಇದಕ್ಕೆ ಜಗ್ಗದ ಮುಖಂಡರು ತಕ್ಷಣ ಈ ವಿಷಯವನ್ನು ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕೃಷಿ ಅಧಿಕಾರಿ ಸನ್ನಿವೇಶದ ಸೂಕ್ಷ್ಮತೆಯನ್ನು ಗಮನಿಸಿ ದೂರವೇ ಉಳಿದಿದ್ದಾರೆ. ನಂತರ ಮುಖಂಡರು ಈ ವಿಷಯವನ್ನು ತಹಶೀಲ್ದಾರ್ರ ಗಮನಕ್ಕೆ ತರಲಾಗಿ ಸ್ಥಳಕ್ಕೆ ಭೇಟಿ ನೀಡಿದ ಅಪರ್ಣಾ ಪಾವಟೆ ಗುರುವಾರದ ಹೊತ್ತಿಗೆ ಗೊಬ್ಬರದ ಕಂಪೆನಿಯ ಡೀಲರ್ ಜೊತೆ ಮಾತನಾಡಿ ರೈತರಿಗಾದ ಅನ್ಯಾಯವನ್ನು ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದರು.
ಮಳಿಗೆಯಲ್ಲಿ ದಾಸ್ತಾನು ಮಾಡಲಾಗಿದ್ದ ಅದೇ ಕಂಪೆನಿಯ ಇತರ ಚೀಲಗಳನ್ನು ಪರೀಕ್ಷಿಸಿದಾಗ ಅದರಲ್ಲಿಯೂ ಮರಳನ್ನು ಮಿಶ್ರಣ ಮಾಡಿರುವುದು ಕಂಡು ಬಂದಿತು. ನಂತರ ವಂಚನೆ ಮಾಡಿರುವ ಕುರಿತು ಪೊಲೀಸರಿಗೆ ದೂರು ಸಲ್ಲಿಸುವುದಾಗಿ ಮುಖಂಡರು ತಿಳಿಸಿದರು.