ನವದೆಹಲಿ (ಪಿಟಿಐ): ಪುಣೆಗೆ ತೆರಳಬೇಕಿದ್ದರಿಂದ ನ್ಯಾಯಾಲಯ ಕಲಾಪಕ್ಕೆ ಖುದ್ದು ಹಾಜರಾತಿಗೆ ವಿನಾಯಿತಿ ನೀಡುವಂತೆ ಕೋರಿ ಕಾಮನ್ವೆಲ್ತ್ ಕ್ರೀಡಾಕೂಟದ ಸಂಘಟನಾ ಸಮಿತಿಯ ಅಧ್ಯಕ್ಷರಾಗಿದ್ದ ಸುರೇಶ ಕಲ್ಮಾಡಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.
ಪುಣೆಯಲ್ಲಿ ವೈದ್ಯಕೀಯ ತಪಾಸಣೆ ಮತ್ತು ಕುಟುಂಬದ ಸದಸ್ಯರನ್ನು ಭೇಟಿಗೆ ತೆರಳಲು ಫೆಬ್ರುವರಿ 3 ಮತ್ತು 4ರಂದು ಅನುಮತಿ ನೀಡುವಂತೆ ಕಲ್ಮಾಡಿ ಸಲ್ಲಿಸಿದ ಮನವಿಯನ್ನು ವಿಶೇಷ ನ್ಯಾಯಾಧೀಶ ತಲವಂತ್ ಸಿಂಗ್ ತಿರಸ್ಕರಿಸಿದ್ದಾರೆ.
`ಆರೋಪಿ (ಕಲ್ಮಾಡಿ)ಗೆ ಈ ಹಿಂದೆ ಪುಣೆಯಲ್ಲಿ ಜನವರಿ 28ರಂದು ಮೊಮ್ಮಗಳ ಭೇಟಿಗಾಗಿ ಅನುಮತಿ ನೀಡಲಾಗಿತ್ತು. ಆದರೆ ಅದರ ಉಪಯೋಗ ಪಡೆಯದೇ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ~ ಎಂದು ನ್ಯಾಯಾಲಯ ಹೇಳಿದೆ.
ಕಲ್ಮಾಡಿ ವೈದ್ಯಕೀಯ ತಪಾಸಣೆ ಕುರಿತು ಹೇಳಿರುವ ನ್ಯಾಯಾಲಯ, ಈಗಾಗಲೇ ದೆಹಲಿ ಮತ್ತು ಗುಡಗಾಂವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಹೃದಯಕ್ಕೆ ಸಂಬಂಧಿತ ಕಾಯಿಲೆಗಳಿಗೆ ಇವು ಉತ್ತಮ ಆಸ್ಪತ್ರೆಗಳಾಗಿವೆ ಎಂದಿದ್ದಾರೆ.
ಆದಾಗ್ಯೂ, ಫೆಬ್ರುವರಿ 11 ಮತ್ತು 12ರಂದು ನ್ಯಾಯಾಲಯಕ್ಕೆ ರಜೆ ಇರುವುದರಿಂದ ಅಂದು ಪುಣೆಗೆ ಹೋಗಬಹುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.