ಬೆಂಗಳೂರು: ಬುಧವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಸತಿ ಸಚಿವ ಅಂಬರೀಷ್ ಅವರು ಮಾತಿನ ಜಟಾಪಟಿ ನಡೆಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.
ಸಭೆ ಮುಗಿದು ಹೊರ ಬರುತ್ತಿರುವ ಸಂದರ್ಭದಲ್ಲಿ ಅಂಬರೀಶ್ ಅವರು ಮುಖ್ಯಮಂತ್ರಿ ಬಳಿ ರೇಸ್ಕೋರ್ಸ್ ಸ್ಥಳಾಂತರ ವಿಷಯ ಪ್ರಸ್ತಾಪಿಸಿದರು. ರೇಸ್ಕೋರ್ಸ್ ಸ್ಥಳಾಂತರಿಸಿದರೆ ಹಲವಾರು ಜನರಿಗೆ ತೊಂದರೆಯಾಗುತ್ತದೆ. ತಕ್ಷಣಕ್ಕೆ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ರೇಸ್ಕೋರ್ಸ್ ಸ್ಥಳಾಂತರಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಅಲ್ಲದೆ ಹಿಂದಿನ ಸರ್ಕಾರ ಈ ಬಗ್ಗೆ ನಿರ್ಧಾರವನ್ನೂ ಕೈಗೊಂಡಿದೆ. ಅದನ್ನು ಬದಲಾಯಿಸಲು ಬರುವುದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಉತ್ತರದಿಂದ ಸಿಟ್ಟಾದ ಅಂಬರೀಷ್ `ರೇಸ್ಕೋರ್ಸ್ನ್ನು ಕೇವಲ ಜೂಜಿನ ಜಾಗ ಎಂದು ಪರಿಗಣಿಸಬಾರದು. ಅದನ್ನು ನಂಬಿಕೊಂಡು ಹಲವಾರು ಮಂದಿ ಇದ್ದಾರೆ. ಸ್ಥಳಾಂತರಕ್ಕೆ ಮುನ್ನ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ನಾನು ಜೂಜು ಆಡುವವನು. ದೆಹಲಿಗೋ, ಮುಂಬೈಗೋ ಹೋಗಿ ಆಡುತ್ತೇನೆ. ಇದು ನನ್ನ ಸಮಸ್ಯೆ ಅಲ್ಲ' ಎಂದರು ಎನ್ನಲಾಗಿದೆ.
ಆಗಲೂ ಕೂಡ ಸಿದ್ದರಾಮಯ್ಯ ರೇಸ್ಕೋರ್ಸ್ ಸ್ಥಳಾಂತರದ ಅನಿವಾರ್ಯತೆ ಬಗ್ಗೆಯೇ ಹೇಳಿದರು. ಇದರಿಂದ ಇನ್ನಷ್ಟು ಕೆರಳಿದ ಅಂಬರೀಷ್ ಮುಖ್ಯಮಂತ್ರಿ ಸಮಾಧಾನ ಪಡಿಸುತ್ತಿದ್ದರೂ ಅದನ್ನು ಕಿವಿ ಮೇಲೆ ಹಾಕಿಕೊಳ್ಳದೆ ಹೊರ ನಡೆದರು ಎಂದು ಮೂಲಗಳು ಹೇಳಿವೆ.