ಒಂದು ಕಾಲದ ಮಿಸ್ ಬೆಂಗಳೂರು, `ನವಿಲು ಗರಿಯ ಗೆಳತಿ~ ಮಾಧುರಿ ಭಟ್ಟಾಚಾರ್ಯ ಮಾಡೆಲಿಂಗ್ನಿಂದ ಸಿನೆಮಾ ಜಗತ್ತಿಗೆ ಹಾರಿದ ಮತ್ತೊಬ್ಬ ತಾರೆ. ಕನ್ನಡ ಅಲ್ಲದೇ ಬಾಲಿವುಡ್ನಲ್ಲೂ ಎರಡು ಚಿತ್ರಗಳಲ್ಲಿ ನಟಿಸಿ ಒಂದು ಐಟಂ ಹಾಡಿನಲ್ಲಿ ಕುಣಿದುಅದೃಷ್ಟ ಪರೀಕ್ಷೆ ಬರೆದಿರುವ ಮಾಧುರಿ ಈಗ ಮತ್ತೆ ಸ್ಯಾಂಡಲ್ವುಡ್ಗೆ ಬಂದಿದ್ದಾರೆ.
ಅವರು ಅಭಿನಯಿಸಿರುವ ಹೊಸ ಚಿತ್ರ `ಪ್ರಸಾದ್~ ಫೆಬ್ರುವರಿ ಮೊದಲ ವಾರದಲ್ಲಿ ತೆರೆ ಕಾಣಲಿದೆ. ಎಕೆಕೆ ಎಂಟರ್ಟೈನ್ ಮೆಂಟ್ ಪ್ರೈ. ಲಿ. ನಿರ್ಮಿಸಿರುವ ಈ ಚಿತ್ರವು ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ಬಹು ಭಾಷಾ ನಟ ಅರ್ಜುನ್ ಸರ್ಜಾ ಈ ಚಿತ್ರದ ನಾಯಕ. ಚಿತ್ರರಂಗದಲ್ಲಿ ಒಂದು ಬ್ರೇಕ್ಗಾಗಿ ಕಾಯುತ್ತಿರುವ ಮಾಧುರಿ ತಮ್ಮ ಮನದ ಮಾತುಗಳನ್ನು `ಮೆಟ್ರೊ~ದೊಂದಿಗೆ ಹಂಚಿಕೊಂಡಿದ್ದಾರೆ.
ಪ್ರಸಾದ್ ಚಿತ್ರದ ಬಗ್ಗೆ ಹೇಳಿ....
ನಾನು ಇದುವರೆಗೆ ನಟಿಸಿದ ಚಿತ್ರಗಳಲ್ಲಿ ಇದು ಅತ್ಯುತ್ತಮ ಚಿತ್ರ. ಬಾಯಿ ಬಾರದ ಮತ್ತು ಕಿವಿ ಕೇಳದ ಮಗುವಿನ ತಾಯಿಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೆೀನೆ. ತುಂಬಾ ಸವಾಲಿನ ಪಾತ್ರ ಅದು. ನಿಜ ಜೀವನದಲ್ಲೂ ಆ ಬಾಲಕ ಕಿವುಡ ಮತ್ತು ಮೂಗ.
ಅವನೊಂದಿಗೆ ನಟಿಸುವುದಕ್ಕಾಗಿ ನಾವು ಕೂಡ ಆತನ ಭಾಷೆಯನ್ನು ಕಲಿಯಬೇಕಾಯಿತು. ಅದೊಂದು ಮರೆಯಲಾಗದ ಅನುಭವ.ಇಡೀ ಚಿತ್ರ ತಂಡ ಶ್ರಮ ಹಾಕಿ ಒಂದು ಉತ್ತಮ ಚಿತ್ರವನ್ನು ತಯಾರಿಸಿದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಖಂಡಿತಾ ಎಲ್ಲರಿಗೂ `ಪ್ರಸಾದ್~ ಇಷ್ಟವಾಗುತ್ತದೆ.
ಅರ್ಜುನ್ ಸರ್ಜಾ ಅವರೊಂದಿಗೆ ನಟಿಸುವಾಗಿನ ನಿಮ್ಮ ಅನುಭವ?
ಅವರೊಬ್ಬ ಉತ್ತಮ ನಟ, ನಟನೆ, ಚಿತ್ರ ತಯಾರಿಕೆ ಬಗ್ಗೆ ಅವರಲ್ಲಿ ಸಾಕಷ್ಟು ಅನುಭವವಿದೆ. ಸಿನಿಮಾ ಬಗ್ಗೆ ಅವರಿಗಿರುವ ಪ್ರೀತಿ ಅಮೋಘ.
ಚಿತ್ರದಲ್ಲಿ ನಟಿಸುವಾಗ ತುಂಬಾ ಸಹಕಾರ ನೀಡಿದರು. ಸಹ ನಟರಿಗೆ ಅವರು ಸಲಹೆ, ಮಾರ್ಗದರ್ಶನ ನೀಡುತ್ತಾರೆ. ನಟನೆಯ ಕುರಿತ ಹಲವು ವಿಷಯಗಳನ್ನು ಅವರಿಂದ ನಾನು ಕಲಿತಿದ್ದೆೀನೆ.
ನಿಮ್ಮ ಮುಂದಿನ ಚಿತ್ರಗಳು, ಯೋಜನೆಗಳು...
ಸದ್ಯಕ್ಕೆ ಯಾವ ಚಿತ್ರವೂ ನನ್ನ ಕೈಯಲ್ಲಿಲ್ಲ. ಹಲವು ಕತೆಗಳ ಕುರಿತು ಮಾತುಕತೆ ನಡೆಯುತ್ತಿವೆ. ಆತುರ ಆತುರವಾಗಿ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳುವುದಿಲ್ಲ. ನನ್ನ ಮನಸ್ಸಿಗೆ ಇಷ್ಟವಾದ ಚಿತ್ರಗಳಲ್ಲಿ ಮಾತ್ರ ನಟಿಸುತ್ತೇನೆ. ದೊಡ್ಡ ಯೋಜನೆಗಳೂ ನನ್ನ ಮುಂದಿಲ್ಲ. ಆದರೆ ಈ ಬಾರಿ ನಡೆಯುವ `ಸೆಲೆಬ್ರಿಟಿ ಕ್ರಿಕೆಟ್ಲೀಗ್~ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದೆೀನೆ. ನಮ್ಮ ಚಿತ್ರರಂಗ ಈ ಸಲ ಕಪ್ ಜಯಿಸಲಿ ಎಂದು ಆಶಿಸುತ್ತೇನೆ.
ಮಾಡೆಲಿಂಗ್ ಮತ್ತು ಸಿನಿಮಾದಲ್ಲಿ ಹೆಚ್ಚು ತೃಪ್ತಿ ನೀಡುವ ಕ್ಷೇತ್ರ...
ಖಂಡಿತಾ ಸಿನಿಮಾ. ಮಾಡೆಲಿಂಗ್ನಲ್ಲಿ ನೀವು ಮಾಡೆಲ್ ಹೊರತಾಗಿ ಬೇರೇನೂ ಅಲ್ಲ. ಆದರೆ ಸಿನಿಮಾ ಹಾಗಲ್ಲ. ಪ್ರತಿಯೊಂದು ಸಿನಿಮಾಪ್ರತಿಯೊಬ್ಬ ನಟ, ನಟಿಗೆ ಹೊಸ ಪಾತ್ರಗಳನ್ನು ನೀಡುತ್ತದೆ. ಜನರು ಆ ಪಾತ್ರಗಳಿಂದ ನಟ-ನಟಿಯರನ್ನು ಗುರುತಿಸುತ್ತಾರೆ. ಕಲಾವಿದ/ದೆಯೊಬ್ಬಳಿಗೆ ಹೆಚ್ಚು ಖುಷಿ ನೀಡುವುದು ಇದೇ. ನನಗೆ ನಟನೆಯೇ ಹೆಚ್ಚು ತೃಪ್ತಿ ನೀಡಿದೆ.
ಈಗಲೂ ಮಾಡೆಲಿಂಗ್ನಲ್ಲಿ ತೊಡಗಿಸಿಕೊಂಡಿದ್ದೀರಾ?
ಹೌದು. ಆದರೆ ಆಯ್ಕೆ ಮಾಡುವಾಗ ತುಂಬಾ ಎಚ್ಚರ ವಹಿಸುತ್ತೇನೆ. ಕೆಲವು ಬಾರಿ ಆತ್ಮೀಯ ಮಿತ್ರರ ಒತ್ತಾಯದಿಂದಾಗಿ ಪ್ರಾಜೆಕ್ಟ್ಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ.
ಬಾಲಿವುಡ್ನಲ್ಲಿ ನಿಮ್ಮ ಅನುಭವ...
ಸಿಹಿ ಅನುಭವ ಆಗಿಲ್ಲ. ತುಂಬಾ ಕಷ್ಟ ಪಟ್ಟಿದ್ದೆೀನೆ. ಅಲ್ಲಿ ಗಟ್ಟಿಯಾಗಿ ತಳವೂರಲುಅದೃಷ್ಟ ಬೇಕು. ಹೆಚ್ಚಿನ ಪ್ರಭಾವವನ್ನು ಹೊಂದಿರಬೇಕಾಗುತ್ತದೆ. ಬಾಲಿವುಡ್ನಲ್ಲಿ ಹೆಸರು ಮಾಡಿರುವ ವ್ಯಕ್ತಿಗಳ ಸಂಪರ್ಕವೂ ಬೇಕು. ಗಾಡ್ ಫಾದರ್ಗಳಿದ್ದರೆ ಬಾಲಿವುಡ್ ಅಂಗಳದಲ್ಲಿ ಆಟವಾಡಬಹುದು.
ನೆಚ್ಚಿನ ನಟ ನಟಿಯರು...
ಹಾಲಿವುಡ್ನಲ್ಲಿ ಟಾಮ್ ಕ್ರೂಸ್ ಇಷ್ಟ. ಬಾಲಿವುಡ್ನಲ್ಲಿ ಹೃತಿಕ್ ರೋಷನ್, ಸಲ್ಮಾನ್ ಖಾನ್, ಕನ್ನಡದಲ್ಲಿ ಸುದೀಪ್ ನೆಚ್ಚಿನ ನಟ. ಧ್ರುವ ಕೂಡ ಇಷ್ಟವಾಗುತ್ತಾರೆ. ನಟಿಯರಲ್ಲಿ ಕರೀನಾ ಹೆಚ್ಚು ಇಷ್ಟ. ಕನ್ನಡದಲ್ಲಿ ಹೆಚ್ಚಿನ ನಟಿಯರು ನನ್ನ ಸ್ನೇಹಿತೆಯರು. ಐಂದ್ರಿತಾ ರೇ, ಪೂಜಾ ಗಾಂಧಿ, ರಮ್ಯಾ... ಹೆಚ್ಚು ಆಪ್ತರಾಗುತ್ತಾರೆ.
ಬಿಡುವಿನ ವೇಳೆಯನ್ನು ಹೇಗೆ ಕಳೆಯುವಿರಿ?
ಹೆಚ್ಚಾಗಿ ಜಿಮ್ನಲ್ಲಿ ಕಾಲ ಕಳೆಯುತ್ತೇನೆ. ಅದರ ಹೊರತಾಗಿ ಕನ್ನಡ, ಹಿಂದಿ, ಬಂಗಾಳಿ ಸಿನಿಮಾಗಳನ್ನು ನೋಡುತ್ತೇನೆ.
ಮದುವೆಯ ಯೋಚನೆ ಸುಳಿದಿದಿಯೇ?
ಸದ್ಯಕ್ಕೆ ಆ ಯೋಚನೆ ಇಲ್ಲ. ಒಳ್ಳೆ ಹುಡುಗ ಸಿಕ್ಕಿದರೆ ಆಗಬಾರದು ಅಂತಾನೂ ಇಲ್ವಲ.
ನಿಮ್ಮ ಕನಸಿನ ಹುಡುಗ ಹೇಗಿರಬೇಕು?
ಹೃದಯವಂತನಾಗಿರಬೇಕು. ಹುಡುಗ ಹೇಗೆ ಕಾಣಿಸ್ತಾನೆ ಅನ್ನುವುದು ಮುಖ್ಯ ಅಲ್ಲ. ಆತ ಹೆಚ್ಚು ಕಾಲ ನನ್ನೊಂದಿಗೇ ಕಳೆಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಹುಡುಗನ ವ್ಯಕ್ತಿತ್ವ ನನಗೆ ಇಷ್ಟವಾಗಬೇಕು.
ಭವಿಷ್ಯದ ಆಕಾಂಕ್ಷೆಗಳು...
ದೊಡ್ಡ ಆಕಾಂಕ್ಷೆಗಳಿಲ್ಲ. ಇರುವುದರಲ್ಲಿ ತೃಪ್ತಿಪಡಬೇಕು. ಯಾವಾಗಲೂ ಸಂತೋಷವಾಗಿ ಇರಬೇಕು. ಅಷ್ಟೇ.
ಬೆಂಗಳೂರು ಮತ್ತು ನೀವು...
ಇದು ನನ್ನ ಹುಟ್ಟೂರು. ಇಲ್ಲೇ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ. ನನ್ನ ಸ್ನೇಹಿತರು, ಹಿತೈಷಿಗಳು ಎಲ್ಲ ಇಲ್ಲೇ ಇದ್ದಾರೆ. ಅದಕ್ಕಿಂತ ಹೆಚ್ಚಾಗಿ ನಾನು ವೃತ್ತಿಯನ್ನು ಆರಂಭಿಸಿದ್ದು ಇಲ್ಲಿಂದಲೇ. ಹಾಗಾಗಿ ಬೆಂಗಳೂರಿನ ಬಗ್ಗೆ ನನ್ನ ಮನಸ್ಸಿನಲ್ಲಿ ವಿಶೇಷ ಸ್ಥಾನವಿದೆ.
ಹೊಸ ವರ್ಷದ ದಿನ ನೀವು ಕೈಗೊಂಡ ನಿರ್ಧಾರ ಏನು?
ಚೆನ್ನಾಗಿ ಯೋಚಿಸಿ ಮಾತನಾಡುವ ನಿರ್ಧಾರವನ್ನು ಕೈಗೊಂಡಿದ್ದೆೀನೆ. ಯೋಚಿಸದೇ ಆಡಿದ ಮಾತುಗಳು ಹಲವು ಬಾರಿ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಾಗಾಗಿ ಇನ್ನು ಮುಂದೆ ಮಾತಾಡುವ ಮೊದಲು ಎರಡೆರಡು ಬಾರಿ ಯೋಚಿಸುತ್ತೇನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.