ಬೆಂಗಳೂರು: 2011-12ನೇ ಸಾಲಿನ ಬಜೆಟ್ನಲ್ಲಿ ಸಿನಿಮಾ ರಂಗಕ್ಕೂ ಆದ್ಯತೆ ದೊರೆತಿದೆ. ಸಹಾಯಧನ ನೀಡಲಾಗುವ ಕನ್ನಡ ಚಿತ್ರಗಳ ಸಂಖ್ಯೆಯನ್ನು 50ರಿಂದ 75ಕ್ಕೆ ಹೆಚ್ಚಿಸಲಾಗಿದೆ.
ಹಾಸ್ಯನಟ ನರಸಿಂಹರಾಜು ಅವರ ನೆನಪಿನಲ್ಲಿ ಕಲಾಮಂದಿರ ನಿರ್ಮಾಣಕ್ಕೆ ರೂ 1 ಕೋಟಿ ಮೀಸಲಿಡಲಾಗಿದೆ. ಕಂಠೀರವ ಸ್ಟುಡಿಯೋ ಅಭಿವೃದ್ಧಿಗೆ ರೂ 5 ಕೋಟಿ ಮೀಸಲು. ಕನ್ನಡ ಚಲನಚಿತ್ರ ವಿತರಣಾ ಸಂಸ್ಥೆಗಳಿಗೆ ನೋಂದಣಿಯಿಂದ ವಿನಾಯಿತಿ ನೀಡಲಾಗಿದೆ. ಚಲನಚಿತ್ರಗಳ ಗುತ್ತಿಗೆ ಹಾಗೂ ಹಕ್ಕುಸ್ವಾಮ್ಯ ಹಸ್ತಾಂತರಿಸಲು ತೆರಿಗೆ ವಿನಾಯಿತಿ ನೀಡಲಾಗಿದೆ.
ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಡೆಸಲು ರೂ 5 ಕೋಟಿ ಮೀಸಲು ಇಡಲಾಗಿದೆ.
ಸ್ವಾಗತ: ಕನ್ನಡ ಚಲನಚಿತ್ರ ರಂಗದ ಬೆಳವಣಿಗೆ ಬಜೆಟ್ ಪೂರಕವಾಗಿದೆ ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಕೆ.ಸಿ.ಎನ್. ಚಂದ್ರಶೇಖರ್ ತಿಳಿಸಿದ್ದಾರೆ.
ಭೂ ಪರಿವರ್ತನೆ ಸುಲಭ: ಭೂ ಸ್ವಾಧೀನಕ್ಕೆ ರೈತರಿಂದ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸರ್ಕಾರ ಯಾವುದೇ ಉದ್ದೇಶದ ಸುಲಭವಾಗಿ ಭೂಮಿ ದೊರಕುವಂತೆ ಮಾಡಲು ಭೂ ಕಂದಾಯ ಕಾಯ್ದೆ 1964ಕ್ಕೆ ತಿದ್ದುಪಡಿ ತರಲು ತೀರ್ಮಾನಿಸಿದೆ. ಇದರಿಂದಾಗಿ 3 ತಿಂಗಳ ಒಳಗೆ ವಿವಿಧ ಚಟುವಟಿಕೆಗಳಿಗೆ ಭೂಮಿ ಪರಿವರ್ತಿಸಲು ಸಾಧ್ಯವಾಗಲಿದೆ.
2011-12ನೇ ಸಾಲಿನ ಕೃಷಿ ಬಜೆಟ್ನಲ್ಲಿ ಇದನ್ನು ಪ್ರಕಟಿಸಲಾಗಿದೆ. ಅಲ್ಲದೆ ಭೂಮಿ ಲಭ್ಯತೆ, ಮಾರಾಟ, ಪರಿವರ್ತನೆ ಮತ್ತಿತರ ಪ್ರಕ್ರಿಯೆಗಳನ್ನು ಮತ್ತಷ್ಟು ಸರಳೀಕರಣಗೊಳಿಸುವ ದೃಷ್ಟಿಯಿಂದ 1961ರ ಭೂ ಸುಧಾರಣಾ ಕಾಯ್ದೆ ಸೆಕ್ಷನ್ 79ಎ, 79ಬಿ ಮತ್ತು 109ಕ್ಕೆ ಸೂಕ್ತ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.