ಚೆನ್ನೈ: ದಕ್ಷಿಣ ಭಾರತದ ಹೆಸರಾಂತ ಚಲನಚಿತ್ರ ಸಂಗೀತ ಸಂಯೋಜಕ ಹಾಗೂ ಪಿಟೀಲು ವಾದಕ ಟಿ.ಕೆ.ರಾಮಮೂರ್ತಿ (92) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.
ಸಂಗೀತ ಸಂಯೋಜಕರಾಗಿ ದಂತಕತೆಯೇ ಆಗಿದ್ದ ಅವರು ಕೆಲ ದಿನಗಳಿಂದ ಅಸ್ವಸ್ಥರಾಗಿದ್ದರು. ಅವರಿಗೆ ಆರು ಪುತ್ರಿಯರು ಮತ್ತು ನಾಲ್ವರು ಪುತ್ರರು ಇದ್ದಾರೆ. ಮತ್ತೊಬ್ಬ ಪ್ರತಿಭಾನ್ವಿತ ಚಲನಚಿತ್ರ ಸಂಗೀತ ನಿರ್ದೇಶಕ ಎಂ.ಎಸ್.ವಿಶ್ವನಾಥನ್ ಮತ್ತು ರಾಮಮೂರ್ತಿ ಅವರ ಜೋಡಿ ದಕ್ಷಿಣ ಭಾರತದ ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ಹಲವು ದಶಕಗಳ ಕಾಲ `ಸಯಾಮಿ ಅವಳಿಗಳು' ಎಂದೇ ಹೆಸರಾಗಿತ್ತು. `ಲಘು ಸಂಗೀತದ ದೊರೆಗಳು' ಎಂದೂ ಈ ಇಬ್ಬರು ಖ್ಯಾತರಾಗಿದ್ದರು.
ರಾಮಮೂರ್ತಿ- ವಿಶ್ವನಾಥನ್ ಅವರು ಒಟ್ಟಾಗಿ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ 700ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. 1922ರಲ್ಲಿ ತಿರುಚಿರಾಪಳ್ಳಿಯಲ್ಲಿ ಕೃಷ್ಣಸ್ವಾಮಿ ಅಯ್ಯರ್ ಅವರ ಮಗನಾಗಿ ಹುಟ್ಟಿದ ರಾಮಮೂರ್ತಿ 14 ವರ್ಷದ ಬಾಲಕನಾಗಿದ್ದಾಗಲೇ ಪಿಟೀಲು ವಾದಕನಾಗಿ ಚಲನಚಿತ್ರ ಕ್ಷೇತ್ರ ಪ್ರವೇಶಿಸಿದ್ದರು.