ಬೀದರ್: ಸಿನಿಮಾಗಳು ಸಮಾಜವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸುತ್ತವೆ ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದರು.ಬೀದರ್ ಉತ್ಸವದ ಅಂಗವಾಗಿ ಜಿಲ್ಲಾಡಳಿತ ಹಾಗೂ ಬೀದರ್ ಸಿನಿ ಸೊಸೈಟಿ ಜಂಟಿಯಾಗಿ ಆಯೋಜಿಸಿರುವ ಮೂರು ದಿನಗಳ ಮಕ್ಕಳ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಿನಿಮಾ ವೀಕ್ಷಣೆಯಿಂದ ಹಲವಾರು ಪ್ರಯೋಜನಗಳಿವೆ.ನಮ್ಮ ಜ್ಞಾನವನ್ನು ಹೆಚ್ಚಿಸುವುದರೊಂದಿಗೆ ಸಮಾಜದ ಕುರಿತಾಗಿ ನಮಗೆ ಹೊಸ ದೃಷ್ಟಿಕೋನವನ್ನು ಒದಗಿಸುತ್ತದೆ. ಸಿನಿಮಾಗಳು ಮಹತ್ವಾಕಾಂಕ್ಷೆಯನ್ನು ಹುಟ್ಟಿಸಿ ಜೀವನದಲ್ಲಿ ಹೊಸದನ್ನು ಸಾಧಿಸಲು ಪ್ರೇರಣೆ ನೀಡುತ್ತವೆ ಎಂದು ಹೇಳಿದರು.ಬೀದರ್ ಉತ್ಸವದ ಅಂಗವಾಗಿ ಹಲವಾರು ವೈಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದೇ ಮೊದಲ ಬಾರಿಗೆ ಮಕ್ಕಳ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ.
ಚಲಚಿತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಚಿತ್ರನಟಿ ಅಮೂಲ್ಯ, ಕಳೆದ ವರ್ಷ ನಡೆದ ಬೀದರ್ ಉತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಲಭಿಸಿತ್ತು. ಬೀದರ್ ಕೋಟೆ ಸುಂದರವಾಗಿದೆ. ಉತ್ಸವಕ್ಕೆ ಪೂರ್ವಭಾಯಾಗಿ ಮಕ್ಕಳ ಚಲನಚಿತ್ರೋತ್ಸವ ಆಯೋಜಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.ಬೀದರ್ ಸಿನಿ ಸೊಸೈಟಿಯ ಮಧುಕರರಾವ್ ಪ್ರಾಸ್ತಾಕವಾಗಿ ಮಾತನಾಡಿದರು. ರಿಷಿಕೇಶ್ ಬಹಾದ್ದೂರ ದೇಸಾಯಿ ನಿರೂಪಿಸಿದರು.
ಚಲನಚಿತ್ರೋತ್ಸವ ಮೂರು ದಿನಗಳ ಕಾಲ ರಂಗಮಂದಿರದಲ್ಲಿ ನಡೆಯಲಿದ್ದು, ಮೊದಲ ದಿನ ಕನ್ನಡದ ಚಿನ್ನಾರಿ ಮುತ್ತಾ ಪ್ರದರ್ಶನ ನಡೆಯಿತು. ಮಂಗಳವಾರ ಬೆಳಿಗ್ಗೆ 9.30 ಗಂಟೆಗೆ ಇಂಗ್ಲಿಷ್ ಅನಿಮೇಷನ್ ಚಿತ್ರ ‘ಬೀ’ ಪ್ರದರ್ಶನಗೊಳ್ಳಲಿದೆ. ಬುಧವಾರ ಹಿಂದಿ ಚಿತ್ರ ‘ತೂನ್ಪೂರ್ ಕಾ ಸೂಪರ್ ಹಿರೋ’ ಪ್ರದರ್ಶನಗೊಳ್ಳಲಿದೆ.