ಬಾರಾಸತ್ (ಪಶ್ಚಿಮಬಂಗಾಳ): 24 ಪರಗಣ ಜಿಲ್ಲೆಯ ಹರೋಯ್ನಲ್ಲಿ ಸಿಪಿಎಂ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರ ಮಧ್ಯೆ ಸೋಮವಾರ ಎರಡು ಮತಗಟ್ಟೆಗಳ ಬಳಿ ನಡೆದ ಮಾರಾಮಾರಿಯಲ್ಲಿ13 ಮಂದಿ ಗಾಯಗೊಂಡಿದ್ದಾರೆ.
ಹರೋಯ್ನ ಬ್ರಹ್ಮನ್ಚಕ್ ಪ್ರದೇಶದ ಎರಡು ಮತಗಟ್ಟೆಗಳ ಬಳಿ ಎದುರಾಳಿ ಪಕ್ಷದ ಬೆಂಬಲಿಗರು ಕಲ್ಲು ತೂರಾಟ ನಡೆಸಿದರು.
ಕೂಡಲೇ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಒ) ಸ್ಥಳಕ್ಕೆ ಧಾವಿಸಿದರು. ಸಿಆರ್ಪಿಎಫ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಗಾಯಾಳುಗಳಿಗೆ ಹರೋಯ್ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಯಿತು.
ಬಾಂಬ್ ಎಸೆತ: ಕೋಲ್ಕತ್ತದ ಮಾಜಿ ಉಪ ಮೇಯರ್ ಮೀನಾ ದೇವಿ ಪುರೋಹಿತ್ ಅವರ ಕಾರಿನ ಮೇಲೆ ಅಪರಿಚಿತ ದುಷ್ಕರ್ಮಿಗಳು ಎರಡು ಬಾಂಬ್ಗಳನ್ನು ಎಸೆದ ಘಟನೆ ಬಾವ್ಬಜಾರ್ನಲ್ಲಿ ನಡೆದಿದೆ. ಬಾಂಬ್ ಗುರಿ ತಪ್ಪಿದ್ದರಿಂದ ಯಾರಿಗೂ ಹಾನಿಯಾಗಿಲ್ಲ.
ತನಿಖೆ ನಡೆಯುತ್ತಿದ್ದು, ಆರೋಪಿಗಳಿಗಾಗಿ ಹುಟುಕಾಟ ನಡೆದಿದೆ.
ಕೋಲ್ಕತ್ತ ದಕ್ಷಿಣ ಕ್ಷೇತ್ರದಲ್ಲಿ ದುಷ್ಕರ್ಮಿಗಳು ಸಿಪಿಎಂ ಅಭ್ಯರ್ಥಿ ನಂದಿನಿ ಮುಖರ್ಜಿ ಕಾರು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಕೂಡಲೇ ನಂದಿನಿ ಪೊಲೀಸರನ್ನು ಕರೆಸಿದರು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇದು ಟಿಎಂಸಿ ಕಿತಾಪತಿ ಎಂದು ಸಿಪಿಎಂ ದೂರಿದೆ. ಆದರೆ ಇದನ್ನು ಟಿಎಂಸಿ ಅಲ್ಲಗಳೆದಿದೆ. ಜೊಯ್ನಗರ ಕ್ಷೇತ್ರದಲ್ಲಿ ಆರ್ಎಸ್ಪಿ ಮತಗಟ್ಟೆ ಏಜೆಂಟ್ ಒಬ್ಬರನ್ನು ಟಿಎಂಸಿ ಕಾರ್ಯಕರ್ತನೊಬ್ಬ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಆದರೆ ಟಿಎಂಸಿ ಈ ಪ್ರಕರಣದಲ್ಲಿ ತನ್ನ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದೆ.