ನವದೆಹಲಿ (ಪಿಟಿಐ): ಲೋಕಪಾಲ ಸಂಸ್ಥೆಯಿಂದ ಯಾವ ಸಾಧನೆಯೂ ಸಾಧ್ಯವಿಲ್ಲ ಎಂಬುದಾಗಿ ಭಾವನೆ ಇದ್ದರೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರು ಕರಡು ಲೋಕಪಾಲ ಮಸೂದೆ ರಚನಾ ಜಂಟಿ ಸಮಿತಿಗೆ ರಾಜೀನಾಮೆ ನೀಡಬೇಕು ಎಂದು ಗಾಂಧಿವಾದಿ ಅಣ್ಣಾ ಹಜಾರೆ ಅವರು ಸೋಮವಾರ ಹೇಳಿದ್ದಾರೆ.
ಲೋಕಪಾಲ ಸಂಸ್ಥೆ ಬಗ್ಗೆ ಕಪಿಲ್ ಸಿಬಲ್ ನೀಡಿದ ಹೇಳಿಕೆಗೆ ಖಾರ ಪ್ರತಿಕ್ರಿಯೆ ನೀಡಿದ ಹಜಾರೆ ಅವರು ~ಲೋಕಪಾಲ ಮಸೂದೆಯಿಂದ ಏನೂ ಆಗದು ಎಂಬುದಾಗಿ ಸಿಬಲ್ ಅವರ ಭಾವನೆಯಾಗಿದ್ದರೆ ಆದಷ್ಟೂ ಬೇಗ ಜಂಟಿ ರಚನಾ ಸಮಿತಿಗೆ ರಾಜೀನಾಮೆ ನೀಡಬೇಕು~ ಎಂದು ಹೇಳಿದರು.
~ಅವರು ಯಾಕೆ ತಮ್ಮ ಸಮಯವನ್ನು ಹಾಳು ಮಾಡುತ್ತಿದ್ದಾರೆ? ಅವರು ರಾಷ್ಟ್ರಕ್ಕಾಗಿ ಬೇರೇನಾದರೂ ಕೆಲಸ ಮಾಡಬಹುದು. ಅವರು ಯಾಕೆ ಸಮಿತಿಯಲ್ಲಿ ಇರಬಯಸಿದ್ದಾರೆ. ಏನೂ ಆಗುವುದಿಲ್ಲ ಎಂದು ನೀವು ನಂಬುವುದಾದರೆ ನೀವು ಜಂಟಿ ಸಮಿತಿಯಲ್ಲಿ ಇರಬಾರದು. ರಾಜೀನಾಮೆ ಕೊಟ್ಟು ಬೇರೇನಾದರೂ ಕೆಲಸ ಮಾಡಬೇಕು~ ಎಂದು ಮಹಾರಾಷ್ಟ್ರದಲ್ಲಿನ ತಮ್ಮ ಸ್ವಗ್ರಾಮಕ್ಕೆ ತೆರಳುವ ಮುನ್ನ ವರದಿಗಾರರ ಜೊತೆ ಮಾತನಾಡುತ್ತಾ ಹಜಾರೆ ಹೇಳಿದರು.