ಹೈದರಾಬಾದ್ (ಪಿಟಿಐ): ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ, ಕಡಪಾ ಸಂಸದ ಜಗನ್ಮೋಹನ್ ರೆಡ್ಡಿ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯಸ್ಥ ಹಾಗೂ ಇಂಡಿಯಾ ಸಿಮೆಂಟ್ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಎನ್.ಶ್ರೀನಿವಾಸನ್ ಅವರು ಸೋಮವಾರ ಸಿಬಿಐ ಎದುರು ವಿಚಾರಣೆಗಾಗಿ ಹಾಜರಾದರು.
ಸಿಬಿಐನ ಸೂಚನೆ ಮೇರೆಗೆ ವಿಚಾರಣೆಗಾಗಿ ದೀಲ್ಖುಷ್ ಅತಿಥಿ ಗೃಹಕ್ಕೆ ಆಗಮಿಸಿದ ಶ್ರೀನಿವಾಸ್ ಅವರನ್ನು ಸಿಬಿಐ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಗನ್ ಒಡೆತನದ ಇಂಡಿಯಾ ಸಿಮೆಂಟ್ ಕಂಪೆನಿಯಲ್ಲಿ ಶ್ರೀನಿವಾಸನ್ ಬಂಡವಾಳ ಹೂಡಿಕೆ ಮಾಡಿರುವ ಕುರಿತಂತೆ ಸಿಬಿಐ ಅವರನ್ನು ವಿಚಾರಣೆ ನಡೆಸಲಿದೆ.
ಇವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಜಗನ್ ಹಾಗೂ ಮತ್ತಿತರರ ವಿರುದ್ಧ ಮೂರು ಆರೋಪಪಟ್ಟಿಗಳನ್ನು ಕೋರ್ಟ್ಗೆ ಸಲ್ಲಿಸಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗನ್ ಅವರು ಜೂನ್ 25ರಿಂದ ನ್ಯಾಯಾಂಗ ಬಂಧನದಲ್ಲಿದ್ದು, ಈ ನಡುವೆ ಅವರನ್ನು ಕೂಡ ಸಿಬಿಐ ವಿಚಾರಣೆಗೆ ಒಳಪಡಿಸಿತ್ತು.