ಬೆಂಗಳೂರು: 2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ನಡೆದಿರುವ ಸಾಧ್ಯತೆ ಇದೆ ಎಂದು ಶುಕ್ರವಾರ ಸಂಶಯ ವ್ಯಕ್ತ ಪಡಿಸಿರುವ ಹೈಕೋರ್ಟ್, ಪ್ರಕರಣದ ಕುರಿತು ಏಕೆ ಸಿಬಿಐ ತನಿಖೆಗೆ ಆದೇಶಿಸ ಬಾರದು ಎಂಬುದರ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಚಲನಚಿತ್ರ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಯಲ್ಲಿ ಲೋಪ ನಡೆದಿದೆ ಎಂದು ದೂರಿದ್ದ ನಿರ್ಮಾಪಕ ಬಸಂತಕುಮಾರ್ ಪಾಟೀಲ್, 2010-11ನೇ ಸಾಲಿನ ಪ್ರಶಸ್ತಿ ಆಯ್ಕೆಪಟ್ಟಿಯನ್ನೇ ರದ್ದು ಮಾಡುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾ ರಣೆ ನಡೆಸಿದ ನ್ಯಾಯಮೂರ್ತಿ ರಾಮ ಮೋಹನ ರೆಡ್ಡಿ ಅವರಿದ್ದ ಏಕಸದಸ್ಯ ಪೀಠ, `ಚಲನಚಿತ್ರ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ರಾಜಕಾರಣಿಗಳ ಪಾತ್ರ ಇರುವುದು ಕಾಣುತ್ತಿದೆ. ಚಲನಚಿತ್ರ ರಂಗಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಸರ್ಕಾರ ಮತ್ತು ರಾಜಕಾರಣಿಗಳ ಹಸ್ತಕ್ಷೇಪದ ಕುರಿತು ಖಚಿತವಾಗಿ ತಿಳಿಯಲು ಏಕೆ ಸಿಬಿಐ ತನಿಖೆಗೆ ಆದೇಶಿ ಸಬಾರದು' ಎಂದು ಸರ್ಕಾರವನ್ನು ಪ್ರಶ್ನಿಸಿತು.
ಚಲನಚಿತ್ರಗಳು ಸಮಾಜದ ಮೇಲೆ ಅಗಾಧವಾದ ಪರಿಣಾಮ ಬೀರುತ್ತವೆ. ಈ ಮಾಧ್ಯಮದ ಸದ್ಬಳಕೆ ಮುಖ್ಯ. ಚಿತ್ರರಂಗದ ಬೆಳವಣಿಗೆಯಲ್ಲಿ ಚಲನ ಚಿತ್ರ ವಾಣಿಜ್ಯ ಮಂಡಳಿಯೂ ಮಹ ತ್ವದ ಕೊಡುಗೆ ನೀಡುತ್ತಿದೆ. ಕೆಲವೇ ವ್ಯಕ್ತಿಗಳ ಹಿತಾಸಕ್ತಿಗಾಗಿ ಚಿತ್ರೋದ್ಯಮ ವನ್ನು ಹಾಳು ಮಾಡಬಾರದು. ಎಲ್ಲರೂ ಒಗ್ಗಟ್ಟಾಗಿ ಉದ್ಯಮದ ಏಳ್ಗೆಗೆ ಶ್ರಮಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು.
`ಈ ವಿವಾದ ಮೇಲ್ನೋಟಕ್ಕೆ ಕಾಣಿ ಸುವಷ್ಟು ಸರಳವಾಗಿಲ್ಲ ಅನಿಸುತ್ತಿದೆ. ಆಳದಲ್ಲಿ ಏನಿದೆ ಎಂಬುದನ್ನೂ ತಿಳಿಯಬೇಕಿದೆ' ಎಂದು ನ್ಯಾಯ ಮೂರ್ತಿಗಳು ಹೇಳಿದರು.
ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದ ತುಳು ಚಿತ್ರ `ಕಂಚಿಲ್ದ ಬಾಲೆ' ಚಿತ್ರದ ಸೆನ್ಸಾರ್ ಚಿತ್ರಕಥೆ ಸಲ್ಲಿಸುವಂತೆ ನ್ಯಾಯಪೀಠ ವಾರ್ತಾ ಇಲಾಖೆಗೆ ನಿದೇರ್ಶನ ನೀಡಿತು.