ಬೆಂಗಳೂರು: ಮೂಡುಬಿದಿರೆಯ ಜೈನ ಬಸದಿಯಲ್ಲಿ ನಡೆದಿರುವ ವಿಗ್ರಹ ಕಳವು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುವುದಾಗಿ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ವಿಧಾನಸೌಧದಲ್ಲಿ ಬುಧವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಈ ಪ್ರಕರಣವು ಅಂತರರಾಜ್ಯ ವ್ಯಾಪ್ತಿ ಹೊಂದಿರುವುದರಿಂದ ಸಿಬಿಐ ತನಿಖೆಗೆ ಒಪ್ಪಿಸುವುದು ಸೂಕ್ತ ಎಂದು ಛತ್ತೀಸಗಡದ ಪೊಲೀಸ್ ಮಹಾನಿರ್ದೇಶಕರು ಇತ್ತೀಚೆಗೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಅದನ್ನು ಆಧರಿಸಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಒತ್ತಾಯಿಸುತ್ತೇನೆ’ ಎಂದರು.
‘ಬಸದಿ ಕಳ್ಳತನ ಮಾಡಿದ ವಿಗ್ರಹಗಳನ್ನು ಛತ್ತೀಸಗಡದ ಆಭರಣ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಖರೀದಿ ಮಾಡಿರುವಾತ ಪ್ರಭಾವಿ ವ್ಯಕ್ತಿ. ಛತ್ತೀಸಗಡ ಸರ್ಕಾರ ಕೂಡ ತನಿಖೆಗೆ ಸಹಕರಿಸುತ್ತಿಲ್ಲ. ಆದ್ದರಿಂದ ಪ್ರಕರಣದ ತನಿಖೆಯನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಖರೀದಿದಾರ ತನ್ನ ವಿರುದ್ಧದ ಆರೋಪಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಛತ್ತೀಸಗಡ ಡಿಜಿಪಿ ತಿಳಿಸಿದ್ದಾರೆ. ಕೆಲವು ವಿಗ್ರಹಗಳನ್ನು ಆಂಧ್ರ ಮತ್ತು ಒಡಿಶಾದಲ್ಲಿ ಮಾರಾಟ ಮಾಡಿರುವ ಶಂಕೆಯೂ ಇದೆ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದೇ ಸೂಕ್ತ ಎಂದರು.
‘ಈ ಘಟನೆಯಿಂದ ಇಡೀ ಜೈನ ಸಮುದಾಯಕ್ಕೆ ನೋವಾಗಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಸಮುದಾಯದ ಪರವಾಗಿ ನಾನು ಒತ್ತಾಯಿಸುತ್ತೇನೆ’ ಎಂದು ಹೇಳಿದರು.
ಸಿಬಿಐ ತನಿಖೆ ನಡೆಸುವ ಸಂಬಂಧ ಗೃಹ ಸಚಿವ ಕೆ.ಜೆ.ಜಾರ್ಜ್ ಮತ್ತು ಕಾನೂನು ಸಚಿವ ಟಿ.ವಬಿ.ಜಯಚಂದ್ರ ಅವರಿಗೆ ಈಗಾಗಲೇ ಪ್ರತ್ಯೇಕ ಪತ್ರಗಳನ್ನು ಬರೆದಿರುವುದಾಗಿ ಅವರು ತಿಳಿಸಿದರು.