ನವದೆಹಲಿ (ಪಿಟಿಐ): ದೂರಸಂಪರ್ಕ ಕ್ಷೇತ್ರದ ದೈತ್ಯ ಸಂಸ್ಥೆಯಾದ ಭಾರತ ಸಂಚಾರ ನಿಗಮದ (ಬಿಎಸ್ಎನ್ಎಲ್) ಜಾಹೀರಾತು ಪ್ರಕಟಣೆಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಮೌಲ್ಯದ ಅವ್ಯವಹಾರದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ.
ಬಿಎಸ್ಎನ್ಎಲ್ ಜಾಹೀರಾತು ಮತ್ತು ಮಾರುಕಟ್ಟೆ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರೀಯ ಜಾಗೃತ ಆಯೋಗಕ್ಕೆ (ಸಿವಿಸಿ) ಹಲವು ದೂರುಗಳು ಬಂದಿದ್ದವು. ಈ ದೂರುಗಳನ್ನು ಪರಿಶೀಲನೆಗಾಗಿ ದೂರಸಂಪರ್ಕ ಇಲಾಖೆಗೆ ಕಳುಹಿಸಲಾಗಿತ್ತು.
ಇಲಾಖೆ ನೀಡಿದ ವರದಿಯ ಆಧಾರದ ಮೇಲೆ ತನಿಖೆ ನಡೆಸಿದ ಸಿವಿಸಿಗೆ ಅವ್ಯವಹಾರ ನಡೆದಿರುವುದು ಖಚಿತವಾಗಿತ್ತು. ಸಿವಿಸಿ ಈ ಹಗರಣದ ಸಮಗ್ರ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದು, ಈಗಾಗಲೇ ತನಿಖಾ ಸಂಸ್ಥೆ ಕಾರ್ಯ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ಬಿಎಸ್ಎನ್ಎಲ್ ಕೋಟ್ಯಂತರ ರೂಪಾಯಿ ಮೌಲ್ಯದ ಜಾಹೀರಾತನ್ನು ವಿವಿಧ ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಿತ್ತು. ಇದರಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು ಸಮಗ್ರ ವರದಿಯಿಂದ ಮಾತ್ರ ನಿಖರ ಅಂಕಿ, ಅಂಶ ಹೊರಬೀಳಲು ಸಾಧ್ಯ. ಹೀಗಾಗಿ ಸಿಬಿಐ ತನಿಖೆ ಆರಂಭಿಸಿದೆ ಎಂದು ಸಿವಿಸಿ ಕಚೇರಿಯ ಮೂಲಗಳು ತಿಳಿಸಿವೆ.