ಹೈದರಾಬಾದ್ (ಪಿಟಿಐ): ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಪುತ್ರ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರ ಆಸ್ತಿಗಳ ಮೌಲ್ಯ ನಿರ್ಣಯಿಸುವ ಪ್ರಕ್ರಿಯೆ ಆರಂಭಿಸಿದೆ.
ಜಗನ್ ಅವರ ಮನೆ ಮತ್ತು ಇತರ ಆಸ್ತಿಗಳ `ಮೌಲ್ಯ ನಿರ್ಣಯಿಸಲು~ ಸಿಬಿಐ ಅಧಿಕಾರಿಗಳ ತಂಡ ಗುರುವಾರ ಅವರ ಮನೆ ತಲುಪಿದೆ ಎಂದು ಸಿಬಿಐ ಮೂಲಗಳು ಹೇಳಿವೆ.
ಆಂಧ್ರಪ್ರದೇಶ ಹೈಕೋರ್ಟ್ನ ಸೂಚನೆ ಪ್ರಕಾರ ಜಗನ್ ವಿರುದ್ಧ ವಂಚನೆ, ಕ್ರಿಮಿನಲ್ ಪಿತೂರಿ, ನಂಬಿಕೆ ದ್ರೋಹ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಪ್ರಕರಣವನ್ನು ಸಿಬಿಐ ದಾಖಲಿಸಿದೆ.
ಕಡಪ ಸಂಸದ ಜಗನ್ ತಮ್ಮ ತಂದೆ ಮುಖ್ಯಮಂತ್ರಿಯಾಗಿದ್ದಾಗ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದಾರೆಂಬ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ಸಿಬಿಐಗೆ ಆದೇಶಿಸಿತ್ತು. ಜವಳಿ ಸಚಿವ ಪಿ. ಶಂಕರ್ರಾವ್ ಮತ್ತು ಟಿಡಿಪಿ ನಾಯಕ ಯರ್ರನ್ ನಾಯ್ಡು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ಮೇಲಿನ ವಿಚಾರಣೆಯಲ್ಲಿ ಕೋರ್ಟ್ ಈ ನಿರ್ದೇಶನ ನೀಡಿತ್ತು.