ಕೋಲಾರ: ಇಲಾಖೆಯಲ್ಲಿ ಖಾಲಿ ಇರುವ 14 ಅಧಿಕಾರಿಗಳ ಕೊರತೆ ನೀಗಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಆ ನಿಟ್ಟಿನಲ್ಲಿ ಹಲವರಿಗೆ ಪದೋನ್ನತಿ ನೀಡಲಾಗುವುದು ಎಂದು ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ನಗರದಲ್ಲಿರುವ ಇಲಾಖೆಯ ಜಿಲ್ಲಾ ಅಧಿಕಾರಿ ಕಚೇರಿಯಲ್ಲಿ ಗುರುವಾರ ಪ್ರಗತಿ ಪರಿಶೀಲನೆ ಸಭೆ ನಡೆಸುವ ಮುನ್ನ ಸುದ್ದಿಗಾರರೊಡನೆ ಮಾತನಾಡಿದ ಅವರು, ಇಲಾಖೆಯಲ್ಲಿ ಒಟ್ಟು 2400 ಸಿಬ್ಬಂದಿ ಕೊರತೆ ಇದೆ. ಮೂರು ವರ್ಷದೊಳಗೆ ಆ ಕೊರತೆ ನೀಗಿಸುವ ನಿಟ್ಟಿನಲ್ಲಿ ನೇಮಕಾತಿ ನಡೆಸಲಾಗುವುದು ಎಂದರು.
ಶಿರಾದಲ್ಲಿ ಅಬಕಾರಿ ಅಕಾಡೆಮಿ ಸ್ಥಾಪನೆಗೆ ಚಿಂತನೆ ನಡೆದಿದೆ. ಇಲಾಖೆಯಲ್ಲಿ ಕೆಲಸ ಮಾಡುವ ಎಲ್ಲರಿಗೂ ತರಬೇತಿ ನೀಡುವುದು ಅಕಾಡೆಮಿಯ ಪ್ರಮುಖ ಉದ್ದೇಶ. ಇದೇ ವೇಳೆ ಇಲಾಖೆಯ ಅಧುನೀಕರಣಕ್ಕೆ 1100 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಶಸ್ತ್ರ ಖರೀದಿಗೂ ಚಾಲನೆ ದೊರಕಲಿದೆ ಎಂದರು.
ಅಕ್ರಮ ಮದ್ಯ ಮಾರಾಟ ತಡೆಯಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಕಳ್ಳಬಟ್ಟಿ ಕೇಂದ್ರಗಳ ಪೂರ್ಣ ನಿರ್ಮೂಲನೆಗೂ ಕ್ರಮ ಕೈಗೊಳ್ಳಲಾಗುತ್ತಿದೆ. ನಾನು ಅಧಿಕಾರ ಸ್ವೀಕರಿದ ವೇಳೆ ರಾಜ್ಯದಲ್ಲಿ 1900 ಕೇಂದ್ರಗಳಿದ್ದವು. ಈಗ ಅವುಗಳ ಸಂಖ್ಯೆ 450ಕ್ಕೆ ಇಳಿದಿದೆ. ಅವುಗಳ ಪೈಕಿ ಶೇ. 50ರಷ್ಟನ್ನು ಪರಿಶೀಲನೆ ಮಾಡಲಾಗುತ್ತಿದೆ. ನಂತರ ಅವುಗಳನ್ನು ನಿರ್ಮೂಲನೆ ಮಾಡಲಾಗುವುದು ಎಂದರು.
2008-09ನೇ ಸಾಲಿನಲ್ಲಿ ಇಲಾಖೆಯು 7100 ಕೋಟಿ ಆದಾಯ ಗಳಿಸಿತ್ತು. 10-11ನೇ ಸಾಲಿನ ಹೊತ್ತಿಗೆ ಅದು 9500 ಕೋಟಿ ಆಗಿದೆ. ಜನವರಿ 10ರ ವೇಳೆಗೆ 6837 ಕೋಟಿ ಸಂಗ್ರಹವಾಗಿದೆ ಎಂದರು.