ಕಾರ್ಕಳ: ಇಂದು ಲಭ್ಯವಿರುವ ವಿದ್ಯುನ್ಮಾನ ಪರಿಕರಗಳನ್ನು ಬಳಸಿಕೊಳ್ಳುವುದನ್ನು ಶಿಕ್ಷಣ ಸಂಸ್ಥೆಗಳ ಕಚೇರಿ ಸಿಬ್ಬಂದಿ ಅರಿತಿರಬೇಕು ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಪ್ರಧಾನ ಲೆಕ್ಕಪರಿಶೋಧಕ ಕೆ ಅನಂತನರಾಯಣ ಪೈ ಇಲ್ಲಿ ತಿಳಿಸಿದರು. ಇಲ್ಲಿನ ಭುವನೇಂದ್ರ ಕಾಲೇಜು, ಖಾಸಗಿ ಹಾಗೂ ಅನುದಾನಿಕ ಕಾಲೇಜುಗಳ ಬೋಧಕೇತರ ಸಿಬ್ಬಂದಿ ಸಂಘ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಸಹಕಾರದಲ್ಲಿ ಆಯೋಜಿಸಿದ ‘ಆಡಳಿತದಲ್ಲಿ ಸುಧಾರಣೆ -ಒಂದು ಹೊಸ ಹೆಜ್ಜೆ’ ರಾಜ್ಯ ಮಟ್ಟದ ವಿಚಾರ ಸಂಕಿರಣ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಚೇರಿಗಳಲ್ಲಿ ಲೆಕ್ಕಪತ್ರಗಳನ್ನು ಅತ್ಯಂತ ತ್ವರಿತ ಹಾಗೂ ನಿಖರವಾಗಿ ದಾಖಲಿಸಲು ವಿದ್ಯುನ್ಮಾನ ಪರಿಕರಗಳು ಸಹಕಾರಿಯಾಗಿವೆ. ಸೇವಾತತ್ಪರತೆ, ಸಮಯಪ್ರಜ್ಞೆ, ಮಾನವೀಯ ಮೌಲ್ಯ ಇವುಗಳನ್ನು ಸಂಸ್ಥೆಯ ಎಲ್ಲ ಸಿಬ್ಬಂದಿ ಅರ್ಥ ಮಾಡಿಕೊಂಡು ವಿದ್ಯಾರ್ಥಿಗಳೊಂದಿಗೆ ಸಾಮರಸ್ಯ ಬೆಳೆಸಿಕೊಂಡಲ್ಲಿ ಉತ್ತಮ ಆಡಳಿತ ನೀಡುವುದು ಸಾಧ್ಯ ಎಂದರು.
ಕಾಲೇಜಿನ ಹಿರಿಯ ವಿಶ್ವಸ್ಥ ಶಾಂತಾರಾಮ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರೊ.ಬಿ.ಪದ್ಮನಾಭ ಗೌಡ, ಖಾಸಗಿ ಹಾಗೂ ಅನುದಾನಿತ ಕಾಲೇಜುಗಳ ಬೋಧಕೇತರ ಸಿಬ್ಬಂದಿ ಸಂಘದ ಅಧ್ಯಕ್ಷ ವಿಕ್ಟೋರಿಯನ್ ಫರ್ನಾಂಡಿಸ್ ಕೆ, ಕಾರ್ಯದರ್ಶಿ ರಾಕಿ ಜಿ. ಲೋಬೋ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಸಿ. ರಮೇಶ್, ವಿಚಾರ ಸಂಕಿರಣದ ಸಂಯೋಜಕ ಶಂಕರ್, ಉಪನ್ಯಾಸಕ ಡಾ. ಮಂಜುನಾಥ ಕೋಟ್ಯಾನ್ ಇದ್ದರು.