ಧಾರವಾಡ: ಸಿರಿಧಾನ್ಯ ಸಂಶೋಧನೆ ಹಾಗೂ ಅಭಿವೃದ್ಧಿಗೆ ಕೃಷಿ ವಿಶ್ವವಿದ್ಯಾಲಯ ಮುಂಬರುವ ಬಜೆಟ್ನಲ್ಲಿ ಪ್ರತ್ಯೇಕ ಹಣ ಮೀಸಲಿಡಲಿದೆ ಎಂದು ಕೃಷಿ ವಿವಿ ಕುಲಪತಿ ಡಾ.ಆರ್.ಆರ್.ಹಂಚಿನಾಳ ಹೇಳಿದರು.
ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಸಿರಿಧಾನ್ಯ ಬೆಳೆಗಾರರ ರಾಷ್ಟ್ರೀಯ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಾವೇರಿ ಜಿಲ್ಲೆಯ ಹನುಮನಹಟ್ಟಿಯಲ್ಲಿರುವ ಕೃಷಿ ಮಹಾವಿದ್ಯಾಲಯದಲ್ಲಿ ಸಿರಿಧಾನ್ಯ ಅಧ್ಯಯನ ಕೇಂದ್ರ ಆರಂಭಿಸಲಾಗುವುದು. `ಆಹಾರದಲ್ಲಿ ಸಿರಿಧಾನ್ಯ ಮೊದಲು~ ಎನ್ನುವುದು ಘೋಷವಾಕ್ಯ ಆಗಬೇಕು ಎಂದರು.
ದೇಶದ 120 ಕೋಟಿ ಜನರ ಹೊಟ್ಟೆ ತುಂಬುವುದು ಮತ್ತು ಮಣ್ಣಿನ ಫಲವತ್ತತೆ ಕಾಪಾಡುವುದು ನಮ್ಮ ಮುಂದಿರುವ ಸವಾಲಾಗಿದೆ. ಅದನ್ನು ಪೂರೈಸಲು ಸಿರಿಧಾನ್ಯ ಬೆಳೆಗಳಿಂದ ಮಾತ್ರ ಸಾಧ್ಯ. 1950ರಲ್ಲಿ ಭಾರತದ ಆಹಾರ ಉತ್ಪಾದನೆ 56 ದಶಲಕ್ಷ ಟನ್ ಇತ್ತು, ಹಸಿರು ಕ್ರಾಂತಿಯಿಂದ 2011ರಲ್ಲಿ 250 ದಶಲಕ್ಷ ಟನ್ ಆಗಿದೆ. ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ನಾವು ಸಾಂಪ್ರದಾಯಿಕ ಬೆಳೆಗಳನ್ನು ಮರೆಯುತ್ತಿದ್ದೇವೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಬಸವರಾಜ ತಂಬಾಕೆ ಸಮಾವೇಶ ಉದ್ಘಾಟಿಸಿದರು. ಸಾವಯವ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ 200 ಕೋಟಿ ರೂಪಾಯಿ ಒದಗಿಸಿದೆ. ರೈತರು ಸಾವಯವ ಕೃಷಿಗೆ ಆದ್ಯತೆ ನೀಡಬೇಕು ಎಂದರು.
ರಾಗಿ, ನವಣಿ ಬೆಳೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಜ್ಯ ರೈತ ಸಂಘದ ವತಿಯಿಂದ ರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲಾಗುವುದು. ಹಸಿದ ಹೊಟ್ಟೆಯನ್ನು ಪೌಷ್ಟಿಕ ಆಹಾರದಿಂದ ತುಂಬಿಸುವುದು ಸರ್ಕಾರದ ಕರ್ತವ್ಯ. ಆದ್ದರಿಂದ ಈಗಿನ ಸಂದರ್ಭಕ್ಕೆ ಸಿರಿಧಾನ್ಯ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.