ವ್ಯಾಟಿಕನ್ ಸಿಟಿ (ಎಎಫ್ಪಿ): ಘರ್ಷಣೆಯಿಂದ ನಲುಗಿರುವ ಸಿರಿಯಾದಲ್ಲಿ `ರಕ್ತಪಾತವನ್ನು ಕೊನೆಗಾಣಿಸಬೇಕು' ಎಂದು 16ನೇ ಪೋಪ್ ಬೆನೆಡಿಕ್ಟ್ ಅವರು ಮಂಗಳವಾರ ಕರೆ ನೀಡಿದರು.
ಕ್ರಿಸ್ಮಸ್ ಸಂದರ್ಭದಲ್ಲಿ ಸೇಂಟ್ ಪೀಟರ್ಸ್ ಬೆಸಿಲಿಕಾದ ಉಪ್ಪರಿಗೆಯಿಂದ ಅವರು ಈ ಸಂದೇಶ ನೀಡಿದರು. ವಿಶ್ವದಾದ್ಯಂತ ಕೋಟಿಗಟ್ಟಲೆ ಜನರು ಈ ದೃಶ್ಯಕ್ಕೆ ಸಾಕ್ಷಿಯಾದರು.
`ಅತಿ ಕಷ್ಟಕರ ಸಮಯದಲ್ಲಿ ಮತ್ತು ಅತ್ಯಂತ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಕೂಡ ಜಗತ್ತಿನಲ್ಲಿ ಭರವಸೆ ಎಂಬುದು ಇರುತ್ತದೆ' ಎಂದು ಹೇಳಿದರು.
`ಘರ್ಷಣೆಗಳಿಂದಾಗಿ ನೊಂದಿರುವ ಸಿರಿಯಾದಲ್ಲಿ ಶಾಂತಿ ನೆಲೆಸಲಿ' ಎಂದು ಪ್ರಾರ್ಥಿಸಿದ ಅವರು, `ಸಿರಿಯಾ ಘರ್ಷಣೆ ನಿಲ್ಲಬೇಕು. ನಿರಾಶ್ರಿತರು ಮತ್ತು ನಿರ್ವಸತಿಗರಿಗಾಗಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ಘರ್ಷಣೆಗೆ ರಾಜಕೀಯ ಪರಿಹಾರಕ್ಕಾಗಿ ಮಾತುಕತೆಯ ಮೊರೆ ಹೋಗಬೇಕು' ಎಂದು ಹೇಳಿದರು.
85 ವರ್ಷ ವಯಸ್ಸಿನ ಪೋಪ್ ಅವರ ಸಂದೇಶವನ್ನು ಆಲಿಸಲು ಸೇಂಟ್ ಪೀಟರ್ಸ್ ಸ್ಕ್ವೇರ್ನಲ್ಲಿ 40,000 ಜನರು ಸೇರಿದ್ದರು. ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲಿ, ಚೀನಾದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಲಭಿಸಲಿ ಎಂದೂ ಪ್ರಾರ್ಥಿಸಿದರು.
ನೈಜೀರಿಯಾದಲ್ಲಿ ಚರ್ಚ್ಗಳನ್ನು ಗುರಿಯಾಗಿಸಿಕೊಂಡು ಆಗಾಗ್ಗೆ ನಡೆಯುತ್ತಿರುವ ದಾಳಿ ಬಗ್ಗೆ ವಿಷಾದಿಸಿದರು.