ಮಡಿಕೇರಿ: ಸಬ್ಸಿಡಿ ಅಡುಗೆ ಅನಿಲ ಸಿಲಿಂಡರ್ಗಳ ಪೂರೈಕೆಯನ್ನು ಮಿತಿಗೊಳಿಸಿರುವ ಕೇಂದ್ರದ ಕ್ರಮ ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮಹದೇವಪೇಟೆಯ ಚೌಡೇಶ್ವರಿ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿದರು. ನಂತರ ಕೋಟೆ ಆವರಣಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಖಾಲಿ ಅನಿಲ ಸಿಲಿಂಡರ್ ಸಹಿತ ಪ್ರತಿಭಟನೆ ನಡೆಸಿ, ಆವರಣದಲ್ಲಿಯೇ ಒಲೆಗೆ ಉರಿ ಹಾಕಿ ಅಡುಗೆ ಮಾಡಿದರು.
ಪಕ್ಷದ ರಾಜ್ಯ ಮಹಿಳಾ ಮೋರ್ಚಾ ಪ್ರಮುಖರಾದ ಆಶಾ ತಿಮ್ಮಪ್ಪ ಮಾತನಾಡಿ, ವರ್ಷಕ್ಕೆ 12 ಸಬ್ಸಿಡಿ ಸಿಲಿಂಡರ್ಗಳನ್ನು ವಿತರಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಮೋಣಪ್ಪ ಭಂಡಾರಿ ಮಾತನಾಡಿ, ಕೇಂದ್ರದ ಈ ಧೋರಣೆಯು ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಲಿದೆ ಎಂದರು. ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ರಾಜ್ಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆ ಲೋಕೇಶ್ವರಿ ಗೋಪಾಲ್, ಜಿಲ್ಲಾ ಪಂಚಾಯತಿ ಕೃಷಿ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂತಿ ಬೆಳ್ಯಪ್ಪ, ನಗರಸಭೆ ಸದಸ್ಯೆ ಶಿವಕುಮಾರಿ, ಪ್ರಮುಖರಾದ ಸುಮಾ ಸುದೀಪ್, ಕೆ.ಎಸ್.ಊರ್ಮಿಳಾ, ಕವಿತಾ ಬೋಜಪ್ಪ, ಉಷಾ ತೇಜಸ್ವಿ, ನಳಿನಿ ಗಣೇಶ್, ಇಂದಿರಮ್ಮ, ಚಂದ್ರಿಕಾ ಯೋಗೇಶ್, ಮೈನಾ ಹರೀಶ್, ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುನೀಲ್ ಸುಬ್ರಮಣಿ ಮತ್ತಿತರರು ಇದ್ದರು.