ದಾವಣಗೆರೆ: ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ವಿತರಣೆ ಮಿತಿಗೊಳಿಸಿರುವುದನ್ನು ವಿರೋಧಿಸಿ ಬಿಜೆಪಿ ಜಿಲ್ಲಾ ಘಟಕದ ಮಹಿಳಾ ಮೋರ್ಚಾ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು.
ಕೇಂದ್ರದ ಜನವಿರೋಧಿ ನೀತಿಯಿಂದಾಗಿ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದ್ದ ಸಿಲಿಂಡರ್ ಸಂಖ್ಯೆಯನ್ನು 6ಕ್ಕೆ ಮಿತಿಗೊಳಿಸಲಾಗಿದೆ. ಬಡತನ ಹಾಗೂ ದಿನಬಳಕೆ ವಸ್ತುಗಳ ಬೆಲೆಯೇರಿಕೆಯಿಂದ ಜನಸಾಮಾನ್ಯರು ತತ್ತರಿಸುವಂತಾಗಿದೆ. ಸರ್ಕಾರದ ನಿರ್ಧಾರ ಮಹಿಳೆಯರ ಮನೋಬಲವನ್ನು ಕುಗ್ಗಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಿಂದ ಮೆರವಣಿಗೆ ಹೊರಟ ಮೋರ್ಚಾ ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಸೇರಿ ರಸ್ತೆತಡೆ ನಡೆಸಿದರು. ಟಾಟಾ ಏಸ್ ವಾಹನದಲ್ಲಿ ಗ್ಯಾಸ್ ಸಿಲಿಂಡರ್ ಕಟ್ಟಿ ಮೆರವಣಿಗೆ ನಡೆಸಿದರು. ಪ್ರತಿಭಟನೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಮೇಯರ್ ಸುಧಾ ಜಯರುದ್ರೇಶ್, ಭಾರತಿ ವೀರೇಶ್, ಸಿ.ಎಚ್. ಶಾಂತಾ ದೊರೈ, ಪುಷ್ಪಾ ದುರುಗೇಶ್, ಪ್ರಮೀಳಾ ಬಣಕಾರ್ ಇದ್ದರು.