ಶ್ರೀರಂಗಪಟ್ಟಣ: ಪಟ್ಟಣದ ಸಾರ್ವ ಜನಿಕ ಆಸ್ಪತ್ರೆಯ ಇತಿಹಾಸ ದಲ್ಲಿ ಇದೇ ಮೊದಲ ಬಾರಿಗೆ ಸಿಸೇರಿಯನ್ ಹಾಗೂ ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಆಸ್ಪತ್ರೆಯ ವೈದ್ಯರು ಬಡ ರೋಗಿ ಗಳಲ್ಲಿ ಭರವಸೆ ಮೂಡಿಸಿದ್ದಾರೆ.ಸುಮಾರು 45 ವರ್ಷದ, ಪಟ್ಟಣದ ಭಾಗ್ಯಮ್ಮ ಎಂಬವರನ್ನು ತಪಾಸಣೆಗೆ ಒಳಪಡಿಸಿದಾಗ ಗರ್ಭ ಕೋಶ ತೊಂದರೆ ಇರುವುದು ಕಂಡು ಬಂದಿತ್ತು. ಮೈಸೂರಿನ ಡಾ.ರತ್ನಾಕರ ರಾವ್ ಅವರ ಸಲಹೆ ಪಡೆದು ಇಲ್ಲಿನ ಆಸ್ಪತ್ರೆಯ ವೈದ್ಯರು ಜ.29ರಂದು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಸ್ಪತ್ರೆ ಆರಂಭವಾದ ದಿನದಿಂದ ಇಲ್ಲಿಯ ವರೆಗೆ ಇದು ಮೊದಲ ಗರ್ಭಕೋಶ ಶಸ್ತ್ರಚಿಕಿತ್ಸೆಯಾಗಿದ್ದು ಯಶಸ್ವಿಯಾಗಿದೆ.
ಈ ಹೊಸ ಪ್ರಯತ್ನ ಆಸ್ಪತ್ರೆ ವೈದ್ಯರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಭಾಗ್ಯಮ್ಮ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಶನಿವಾರ (ಫೆ.5) ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಾಗಿ ಡಾ.ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ.
ಸಿಸೇರಿಯನ್: ಪಟ್ಟಣದ ಕುಂಬಾರ ಗೇರಿ ಬೀದಿಯ ಮಂಜುನಾಥ್ ಅವರ ಪತ್ನಿ ಶ್ರುತಿ ಎಂಬವರಿಗೆ ಹೆರಿಗೆ ಸಮಯದಲ್ಲಿ ತೊಂದರೆ ಕಾಣಿಸಿ ಕೊಂಡಿತ್ತು. ಪರಿಸ್ಥಿತಿಯನ್ನು ಅವಲೋಕಿಸಿದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಬಿ. ಶಿವ ಕುಮಾರ್ ಮತ್ತು ಸಿಬ್ಬಂದಿ ಶ್ರುತಿ ಅವರನ್ನು ಸಿಸೇರಿಯನ್ಗೆ ಒಳ ಪಡಿಸಿದರು. ಕಳೆದ ಡಿಸೆಂಬರ್ 23ರಂದು ಮಹಿಳಾ ವೈದ್ಯರಾದ ಡಾ.ವಿನೀತಾ ಹಾಗೂ ಡಾ.ಕೋಮಲ ಅವರ ಜತೆ ಸೇರಿ ಸಿಸೇರಿಯನ್ ಮೂಲಕ ಯಶಸ್ವಿ ಹೆರಿಗೆ ಮಾಡಿಸಿ ್ದದಾರೆ. ತಾಯಿ ಮತ್ತು ಹೆಣ್ಣು ಮಗು ಆರೋಗ್ಯವಾಗಿದ್ದಾರೆ.
‘ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಕನಿಷ್ಠ ರೂ.20 ಸಾವಿರ ಖರ್ಚಾಗುತ್ತಿತ್ತು. ನನ್ನ ತಂಗಿಯ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಇಲ್ಲಿ ಕೇವಲ ರೂ.50 ಖರ್ಚಾಗಿದೆ. ವೈದ್ಯರ ಪ್ರಯತ್ನ, ಪರಿಶ್ರಮದಿಂದ ಸಾಲ ಮಾಡುವುದು ತಪ್ಪಿದೆ’ ಎಂದು ಗರ್ಭ ಕೋಶ ಚಿಕಿತ್ಸೆಗೊಳಗಾದ ಭಾಗ್ಯಮ್ಮ ಸಹೋದರ ಪುಟ್ಟರಾಜು ಸಂತಸ ವ್ಯಕ್ತಪಡಿಸಿದ್ದಾರೆ.
‘ಸಿಸೇರಿಯನ್ ಹಾಗೂ ಗರ್ಭ ಕೋಶ ಶಸ್ತ್ರಚಿಕಿತ್ಸೆ ಅಗತ್ಯ ಎನಿಸಿದರೆ ನಮ್ಮ ಆಸ್ಪತ್ರೆಯಲ್ಲಿ ಮಾಡಿಸಿ ಕೊಳ್ಳಬಹುದು. ಮೈಸೂರು, ಮಂಡ್ಯ ಇತರೆಡೆ ಹೋಗುವ ಅಗತ್ಯ ವಿಲ್ಲ. ಬಡ ಜನರು ಇದರ ಪ್ರಯೋ ಜನ ಪಡೆದುಕೊಳ್ಳಬೇಕು’ ಎಂದು ಡಾ. ಕೆ.ಬಿ.ಶಿವಕಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.