ಬೆಂಗಳೂರು: ಪ್ರಯಾಣಿಕರ ಸೀಟು ಕಾಯ್ದಿರಿಸುವ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ರೈಲ್ವೆ ಮಂಡಳಿಗೆ ಶಿಫಾರಸು ಮಾಡಲಾಗಿದೆ. 200ಕ್ಕಿಂತ ಹೆಚ್ಚು ಪ್ರಯಾಣಿಕರು ನಿರೀಕ್ಷಣಾ ಪಟ್ಟಿಯಲ್ಲಿದ್ದರೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸುವಂತೆ ಕೋರಲಾಗಿದೆ ಎಂದು ರೈಲ್ವೆ ಪ್ರಯಾಣಿಕರ ಸೌಲಭ್ಯಗಳ ಸಮಿತಿ ಅಧ್ಯಕ್ಷ ಚಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಪ್ರಸ್ತುತ 600ರಿಂದ 700 ಪ್ರಯಾಣಿಕರ ನಿರೀಕ್ಷಣಾ ಪಟ್ಟಿ ಪ್ರಕಟಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಕೊನೆಯ ಕ್ಷಣದವರೆಗೂ ಸೀಟು ದೊರೆಯುವ ಆಶಾಭಾವ ಹೊಂದಿರುತ್ತಾರೆ. ಆದ್ದರಿಂದ, 300ಕ್ಕಿಂತ ಹೆಚ್ಚು ಪ್ರಯಾಣಿಕರ ನಿರೀಕ್ಷಣಾ ಪಟ್ಟಿ ಪ್ರಕಟಿಸದಂತೆ ಶಿಫಾರಸು ಮಾಡಲಾಗಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉತ್ತರ ಭಾರತದಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರ ಸಂಖ್ಯೆಯೇ ಹೆಚ್ಚು. ಕಾನೂನು ಪಾಲಿಸದ ಪರಿಣಾಮ ಗಲಾಟೆಗಳು ನಡೆಯುತ್ತಿವೆ. ಆದ್ದರಿಂದ, ಈ ರೀತಿಯ ಕೆಲವು ಬದಲಾವಣೆಗಳನ್ನು ತರಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ರೈಲಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
ಕಳ್ಳತನ ಪ್ರಕರಣಗಳು ನಡೆದರೆ ರೈಲ್ವೆ ಪೊಲೀಸ್ ಪಡೆ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರನ್ನು ಜಂಟಿಯಾಗಿ ಜವಾಬ್ದಾರರನ್ನಾಗಿ ಮಾಡಲಾಗುವುದು. ರಾತ್ರಿ ವೇಳೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪ್ರಯಾಣಿಕರು ಕೇವಲ ಹಗಲು ಹೊತ್ತಿನಲ್ಲಿ ಮಾತ್ರ ಪ್ರಯಾಣಿಸುವ ಪರಿಸ್ಥಿತಿ ಉಂಟಾಗಿದೆ. ರಾತ್ರಿ ಪ್ರಯಾಣ ಮಾಡುವವರ ಸಂಖ್ಯೆಯಲ್ಲೂ ಇಳಿಮುಖವಾಗಿದೆ ಎಂದರು.
ದರಪಟ್ಟಿ ಪ್ರದರ್ಶನ ಕಡ್ಡಾಯ: ರೈಲ್ವೆ ನಿಲ್ದಾಣಗಳಲ್ಲಿ ಕೂಲಿಕಾರ್ಮಿಕರು ತಮ್ಮ ಕೊರಳಲ್ಲಿ ದರಪಟ್ಟಿ ಕಡ್ಡಾಯವಾಗಿ ಪ್ರದರ್ಶನ ಮಾಡಬೇಕು ಎಂದು ನಾರಾಯಣಸ್ವಾಮಿ ತಿಳಿಸಿದರು. ರೈಲ್ವೆ ಇಲಾಖೆ ನಿಗದಿಪಡಿಸಿದ ದರಗಳಂತೆ ಪ್ರಯಾಣಿಕರು ಹಣ ನೀಡಬೇಕು. ಆದರೆ, ಬಹುತೇಕ ಸ್ಥಳಗಳಲ್ಲಿ ಕೂಲಿಕಾರ್ಮಿಕರು ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಆದ್ದರಿಂದ ಈ ನಿಯಮವನ್ನು ಜಾರಿಗೊಳಿಸಲಾಗಿದೆ ಎಂದರು.
ಕಳಪೆ ಊಟ–ತಿಂಡಿ: ಊಟ ಮತ್ತು ತಿಂಡಿ ಹಾಗೂ ಸ್ವಚ್ಛತೆ ಕೊರತೆ ಬಗ್ಗೆ ಪ್ರಯಾಣಿಕರಿಂದ ಸಾಕಷ್ಟು ದೂರುಗಳು ಬಂದಿವೆ. ರೈಲಿನಲ್ಲಿ ಊಟ–ತಿಂಡಿ ವ್ಯವಸ್ಥೆ ಬಹಳ ಕೆಟ್ಟದಾಗಿದೆ. ಪ್ರಸ್ತುತ ಊಟ, ತಿಂಡಿ ಪೂರೈಸುವುದನ್ನು ಹೊರಗುತ್ತಿಗೆಗೆ ನೀಡಲಾಗಿದೆ. ಇನ್ನು ಮುಂದೆ ಊಟತಿಂಡಿ ಕಳಪೆಯಾಗಿದ್ದರೆ ವಿಚಾರಣೆ ಮಾಡಿ ಪರವಾನಗಿ ರದ್ದುಪಡಿಸಲಾಗುವುದು ಎಂದು ತಿಳಿಸಿದರು.
ರೈಲಿನಲ್ಲಿನ ಶೌಚಾಲಯಗಳನ್ನು ಸಂಪೂರ್ಣವಾಗಿ ಯಂತ್ರಗಳ ಮೂಲಕವೇ ಸ್ವಚ್ಛಗೊಳಿಸಲಾಗುವುದು. ಈಗಾಗಲೇ ಕೇಂದ್ರ ಸರ್ಕಾರ ಮಲ ಹೊರುವ ಪದ್ಧತಿ ನಿಷೇಧಿಸಿ ಮಸೂದೆ ಜಾರಿಗೊಳಿಸಿದೆ. ಆದ್ದರಿಂದ ಶೌಚಾಲಯಗಳ ಸ್ವಚ್ಛತೆ ಕಾರ್ಯಕ್ಕೆ ಕಾರ್ಮಿಕರನ್ನು ಬಳಸುವುದಿಲ್ಲ ಎಂದು ತಿಳಿಸಿದರು. ಪ್ರಯಾಣಿಕರ ಸೌಲಭ್ಯಗಳ ಸಮಿತಿಯಲ್ಲಿ ಆರು ಸದಸ್ಯರಿದ್ದು, ಎರಡು ವರ್ಷ ಕಾಲಾವಧಿ ಇದೆ. ಅಧಿಕಾರ ವಹಿಸಿಕೊಂಡ 120 ದಿನಗಳಲ್ಲಿ 80 ದಿನಗಳನ್ನು ಪ್ರವಾಸದಲ್ಲಿ ಕಳೆದಿದ್ದು, 12 ರಾಜ್ಯಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.