ಹೈದರಾಬಾದ್ (ಐಎಎನ್ಎಸ್): ಆಂಧ್ರ ಪ್ರದೇಶದಿಂದ ತೆಲಂಗಾಣ ವಿಭಜಿಸಿ, ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಲಿದ್ದರೂ ಸೀಮಾಂಧ್ರ ಪ್ರಾಂತ್ಯದ ನಾಯಕರು ಮಾತ್ರ ತಮ್ಮ ರಾಜ್ಯ ಒಂದಾಗಿಯೇ ಉಳಿಯುವುದು ಎಂಬ ಭರವಸೆಯಲ್ಲಿದ್ದಾರೆ.
ಕೇಂದ್ರ ಸಚಿವರ ತಂಡವು ರಾಜ್ಯದ ವಿಭಜನೆಗೆ ಸಂಬಂಧಿಸಿದ ವರದಿಯನ್ನು ಅಂತಿಮಗೊಳಿಸಿ, ಮುಂದಿನ ವಾರ ಸಂಪುಟದ ಮುಂದೆ ಕರಡು ಮಸೂದೆ ಮಂಡಿಸುವ ನಿರೀಕ್ಷೆಯಿದೆ. ಆದರೂ ಸೀಮಾಂಧ್ರ (ರಾಯಲಸೀಮಾ ಮತ್ತು ಕರಾವಳಿ ಆಂಧ್ರ ಪ್ರಾಂತ್ಯಗಳು) ಇನ್ನೂ ಭರವಸೆ ಕಳೆದುಕೊಂಡಿಲ್ಲ.
ರಾಜ್ಯ ವಿಭಜನೆಯ ಪ್ರಕ್ರಿಯೆ ಸ್ಥಗಿತಗೊಂಡು, ಇದೇ 5ರಿಂದ 20ರವರೆಗೆ ನಡೆಯಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ ಆಗಲಾರದು ಎಂದು ಸೀಮಾಂಧ್ರ ನಾಯಕರು ನಂಬಿದ್ದಾರೆ. ಅನೇಕ ರಾಜಕೀಯ ಪಕ್ಷಗಳು ರಾಜ್ಯ ವಿಭಜನೆ ವಿರುದ್ಧ ಸಂಸತ್ನಲ್ಲಿ ಮತ ಹಾಕಬಹುದು ಎಂಬ ವಿಶ್ವಾಸ ಅವರದು.
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಕರಡು ಮಸೂದೆಯನ್ನು ಆಂಧ್ರಪ್ರದೇಶ ವಿಧಾನಸಭೆಗೆ ತನ್ನ ಅಭಿಪ್ರಾಯ ತಿಳಿಸುವಂತೆ ಕಳುಹಿಸದಿರಬಹುದು ಅಥವಾ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಿ ಪ್ರಕ್ರಿಯೆ ತಡೆಹಿಡಿಯಬಹುದು. ಒಂದು ವೇಳೆ, ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಲು ನಿರಾಕರಿಸಿದರೂ ಮತ್ತು ರಾಷ್ಟ್ರಪತಿ, ಆಂಧ್ರ ವಿಧಾನಸಭೆ ಅಭಿಪ್ರಾಯ ಪಡೆಯಲು ಮಸೂದೆ ಕಳುಹಿಸದಿದ್ದರೂ ಸಂಸತ್ನಲ್ಲಿ ಅದು ಅಂಗೀಕಾರವಾಗುವುದಿಲ್ಲ ಎಂದು ಹೇಳುತ್ತಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ನೊಂದಿಗೆ ಪ್ರತಿಪಕ್ಷಗಳಾದ ತೆಲುಗು ದೇಶಂ ಮತ್ತು ವೈಎಸ್ಆರ್ ಕಾಂಗ್ರೆಸ್ನ ಸೀಮಾಂಧ್ರ ಪ್ರಾಂತ್ಯ ನಾಯಕರು, ಸರ್ಕಾರಿ ನೌಕರರು, ಕೇಂದ್ರ ಸಚಿವರು ಹಾಗೂ ಇತರ ಸಂಘಟನೆಗಳ ಪ್ರಮುಖರು ರಾಜ್ಯದ ವಿಭಜನೆ ವಿರೋಧಿಸುತ್ತಿದ್ದಾರೆ. ಅಸಾಂವಿಧಾನಿಕ ಮತ್ತು ಅಪ್ರಜಾಸತ್ತಾತ್ಮಕ ಮಾದರಿ ವಿಭಜನೆಯನ್ನು ತಡೆಯುವಂತೆ ಈಗಾಗಲೇ ಅವರು ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.