ನವದೆಹಲಿ (ಪಿಟಿಐ): ಉದ್ದೇಶಿತ ತೆಲಂಗಾಣ ರಚನೆ ಬಳಿಕ ಉಳಿಯುವ ಆಂಧ್ರಪ್ರದೇಶದ ಸೀಮಾಂಧ್ರ (ರಾಯಲಸೀಮೆ ಮತ್ತು ಕರಾವಳಿ ಆಂಧ್ರ) ಭಾಗಕ್ಕೆ ಹೊಸ ರಾಜಧಾನಿ ನಿರ್ಮಿಸುವ ಬಗ್ಗೆ ತಜ್ಞರ ಸಮಿತಿ ರಚಿಸಲಾಗುವುದು ಎಂದು ಸರ್ಕಾರ ಶನಿವಾರ ತಿಳಿಸಿದೆ.
ತೆಲಂಗಾಣ ಕುರಿತ ಮಸೂದೆಗೆ ಸಂಸತ್ ಅಂಗೀಕಾರ ನೀಡಿದ 45 ದಿನದೊಳಗೆ ಈ ಸಮಿತಿ ರಚಿಸಲಾಗುವುದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಹೇಳಿದರು. ಹೊಸ ರಾಜಧಾನಿಯಲ್ಲಿ ರಾಜಭವನ, ಸಚಿವಾಲಯ, ಹೈಕೋರ್ಟ್ ಕಟ್ಟಡಗಳು ಹಾಗೂ ಇನ್ನಿತರ ಸೌಕರ್ಯಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರವು ಹಣಕಾಸು ನೆರವು ನೀಡಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಉನ್ನತ ಮಂಡಳಿಗಳು: ವಿವಾದಕ್ಕೆ ಕಾರಣವಾಗಿರುವ ನದಿಗಳ ನೀರು ಹಂಚಿಕೆ ಕುರಿತಂತೆ ಕೇಂದ್ರ ಸರ್ಕಾರವು ಎರಡು ಹಂತದ ಉನ್ನತ ಮಂಡಳಿಗಳನ್ನು ರಚಿಸಲು ಉದ್ದೇಶಿಸಿದೆ. ಈ ಮಂಡಳಿಗಳು ಸರ್ಕಾರದ ಪ್ರತಿನಿಧಿಗಳು ಮತ್ತು ಅಧಿಕಾರಿ ಪ್ರತಿನಿಧಿಗಳನ್ನು ಒಳಗೊಂಡಿರಬೇಕು ಎಂಬ ಸಲಹೆಯನ್ನು ಕರಡು ಮಸೂದೆಯಲ್ಲಿ ನೀಡಲಾಗಿದೆ’ ಎಂದರು.
‘ಉದ್ದೇಶಿತ ಮಂಡಳಿಗಳಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಇರುತ್ತಾರೆ. ಇವರು ನದಿ ನೀರು ಹಂಚಿಕೆ ಕುರಿತಂತೆ ಚರ್ಚಿಸುವರು. ನದಿ ನೀರು ಹಂಚಿಕೆ ಕುರಿತ ನ್ಯಾಯಮಂಡಳಿಗಳ ತೀರ್ಪು ಅನುಷ್ಠಾನವನ್ನು ಕೃಷ್ಣಾ ಮತ್ತು ಗೋದಾವರಿ ಮಂಡಳಿಗಳು ನಿರ್ವಹಿಸಲಿವೆ.
ಕೃಷ್ಣಾ ಮಂಡಳಿಯು ಸೀಮಾಂಧ್ರ ಭಾಗದಲ್ಲೂ, ಗೋದಾವರಿ ಮಂಡಳಿಯು ತೆಲಂಗಾಣ ಭಾಗದಲ್ಲಿ ಈ ಕಾರ್ಯ ನಿರ್ವಹಿಸಲಿವೆ.
ಬಿಕ್ಕಟ್ಟು ಉಂಟಾಗಬಾರದು ಎಂಬ ಕಾರಣದಿಂದ ಈ ಮಂಡಳಿಗಳ ಕಾರ್ಯ ನಿರ್ವಹಣೆ ಬಗ್ಗೆ ಇದೇ ಮೊದಲ ಬಾರಿಗೆ ರಾಜ್ಯ ವಿಭಜನೆಯ ಕರಡು ಮಸೂದೆಯಲ್ಲೇ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲಾಗಿದೆ’ ಎಂದರು. ಪೋಲಾವರಂ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಗುವುದು ಮತ್ತು ಇದನ್ನು ಕೇಂದ್ರ ಸರ್ಕಾರವೇ ನಿರ್ವಹಿಸಲಿದೆ ಎಂದರು.
ಕೇಂದ್ರ ಸಂಪುಟ ಒಪ್ಪಿಗೆ ನೀಡಿರುವ ಕರಡು ಮಸೂದೆಯಲ್ಲಿ 10 ವರ್ಷಗಳ ಕಾಲ ಹೈದರಾಬಾದ್ ಉಭಯ ರಾಜ್ಯಗಳಿಗೂ ರಾಜಧಾನಿಯಾಗಲಿದೆ ಎಂಬ ಅಂಶ ಇದೆ. ಇದನ್ನು ರಾಷ್ಟ್ರಪತಿ ಅವರಿಗೆ ಕಳುಹಿಸಲಾಗುವುದು. ಅವರು ಇದನ್ನು ಆಂಧ್ರ ವಿಧಾನಮಂಡಲಕ್ಕೆ ಅಭಿಪ್ರಾಯ ಸೂಚಿಸಲು ಕಳುಹಿಸುವರು.
ಸೀಮಾಂಧ್ರ ಬಂದ್: ಮಿಶ್ರ ಪ್ರತಿಕ್ರಿಯೆ
ಹೈದರಾಬಾದ್ (ಪಿಟಿಐ): ಆಂಧ್ರ ವಿಭಜನೆ ಕುರಿತ ಕರಡು ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿರುವುದನ್ನು ಖಂಡಿಸಿ ಅಖಂಡ ಆಂಧ್ರಪ್ರದೇಶ ಪರ ಹೋರಾಟ ನಡೆಸುತ್ತಿರುವ ಸಂಘಟನೆಗಳು ನೀಡಿದ್ದ ಬಂದ್ ಕರೆಗೆ ಶನಿವಾರ ಸೀಮಾಂಧ್ರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷಗಳು ಅಖಂಡ ಆಂಧ್ರಪ್ರದೇಶ ಪರ ಹೋರಾಟ ಮಾಡುತ್ತಿರುವ ಸಂಘಟನೆಗಳೊಂದಿಗೆ ಸೇರಿ ಸೀಮಾಂಧ್ರ ಭಾಗದಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿದ್ದವು. ಈ ಮುನ್ನ, ವೈಎಸ್ಆರ್ ಕಾಂಗ್ರೆಸ್ ಪಕ್ಷ ಮಾತ್ರ ಶುಕ್ರವಾರ ಬಂದ್ಗೆ ಕರೆ ನೀಡಿತ್ತು. ನಂತರ ಇದನ್ನು ಶನಿವಾರಕ್ಕೂ ವಿಸ್ತರಿಸುವಂತೆ ಆ ಪಕ್ಷ ಕರೆ ಕೊಟ್ಟಿತು. ಆಂಧ್ರಪ್ರದೇಶ ಪತ್ರಾಂಕಿತೇತರ ಅಧಿಕಾರಿಗಳ ಸಂಘ, ಟಿಡಿಪಿ ಪ್ರತ್ಯೇಕವಾಗಿ ಶನಿವಾರ ಬಂದ್ಗೆ ಕರೆ ನೀಡಿದ್ದವು.
ಈ ಮಧ್ಯೆ, ಆಂಧ್ರಪ್ರದೇಶ ವಿಭಜನೆ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಜವಳಿ ಸಚಿವ ಕಾವೂರಿ ಸಾಂಬಸದಾಶಿವ ರಾವ್, ಈ ಕುರಿತ ಮಸೂದೆಗೆ ಸಂಸತ್ತಿನಲ್ಲಿ ಅಂಗೀಕಾರ ದೊರಕುವ ಸಾಧ್ಯತೆ ಇಲ್ಲ ಎಂದರು. ‘ಕರಡು ಮಸೂದೆಗೆ ಸಂಪುಟ ಒಪ್ಪಿಗೆ ನೀಡಿರಬಹುದು ಆದರೆ, ಈ ಮಸೂದೆ ಸಂಸತ್ತಿಗೆ ಬರುವುದೇ ಅನುಮಾನ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.