ದಾವಣಗೆರೆ: `ನಿಮ್ಮ ನೆಚ್ಚಿನ ಮಡದಿಗೆ ಯಾವನೋ ಸೀರೆ ತಂದು ಕೊಡುತ್ತಾನೆ ಎಂದರೆ ನೀವು ಎಂಥ ಗಂಡಸರು? ಸೀರೆ ಹಂಚುವ ಅಭ್ಯರ್ಥಿಯನ್ನು ಕಟ್ಟಿ ಹಾಕಿ ಬಾರಿಸಿ, ದೈವ ಸನ್ನಿಧಿಯ ಮುಂದೆ ಹಾಜರುಪಡಿಸಿ' ಎಂದು ಸಿರಿಗೆರೆ ಮಠದ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಾಕೀತು ಮಾಡಿದರು.
ತಾಲ್ಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಆಂಜನೇಯಸ್ವಾಮಿ, ಬಸವೇಶ್ವರಸ್ವಾಮಿ ದೇವಸ್ಥಾನದ ನೂತನ ಗೋಪುರಗಳ ಕಳಸಾರೋಹಣ, ಹಂಪಾಂಬಾ ಹಾಗೂ ಪಂಪಾಪತಿ ನೂತನ ಜೋಡಿ ರಥಗಳ ಉದ್ಘಾಟನೆ ಹಾಗೂ ಸರ್ವ ಶರಣ ಸಮ್ಮೇಳನದಲ್ಲಿ ಅವರು ಮಾತನಾಡಿದರು.
`ಮಾರಿ ಹಬ್ಬದಂತೆ ಆಗಿರುವ ಚುನಾವಣಾ ವ್ಯವಸ್ಥೆಯಲ್ಲಿ ಮತದಾರರನ್ನು ಸೆಳೆಯಲು ಹೆಂಡ, ಹಣ, ಸೀರೆ ಹಂಚುತ್ತಿದ್ದಾರೆ. ಯಾವ ಮಹಿಳೆ ಕದ್ದುಮುಚ್ಚಿ ಸೀರೆ ತೆಗೆದುಕೊಳ್ಳುತ್ತಾರೋ ಅವರ ಚಾರಿತ್ರ್ಯ, ಶೀಲಕ್ಕೆ ಧಕ್ಕೆಯಾಗುತ್ತದೆ' ಎಂದು ಸ್ವಾಮೀಜಿ ಎಚ್ಚರಿಸಿದರು.
` ತವರು ಮನೆಯಿಂದ ಹೆಣ್ಣುಮಕ್ಕಳಿಗೆ ಸೀರೆ ಉಡಿಸುವ ಪದ್ಧತಿ ಇದೆ. ಆ ಕ್ರಿಯೆಯಲ್ಲಿ ಭಾವನಾತ್ಮಕವಾದ, ಪ್ರೀತಿ, ಮಮತೆ, ವಾತ್ಸಲ್ಯದ ಸಂಬಂಧಗಳು ಮೇಳೈಸಿವೆ. ಅದಕ್ಕೆ ಬೆಲೆ ಕಟ್ಟುವುದು ಅಸಾಧ್ಯ. ಚುನಾವಣೆಯಲ್ಲಿ ಯಾವನೋ ಕೊಡುವ ಸೇರೆಯನ್ನು ಏಕೆ ತೆಗೆದುಕೊಳ್ಳಬೇಕು' ಎಂದು ಪ್ರಶ್ನಿಸಿದರು.
`ಇಡೀ ದೇಶ ಭ್ರಷ್ಟಾಚಾರದ ಪಾಪಕೂಪದಲ್ಲಿ ಬಿದ್ದು ವಿಲವಿಲ ಪರಿತಪಿಸುತ್ತಿದೆ. ರಾಜಕಾರಣಿ ಜತೆಗೆ ಇಡೀ ವ್ಯವಸ್ಥೆ ಭ್ರಷ್ಟಾಚಾರದ ಕಪಿಮುಷ್ಟಿಗೆ ಸಿಲುಕಿದೆ. ದಿನನಿತ್ಯವೂ ಒಂದಿಲ್ಲೊಂದು ಹಗರಣ ಬಯಲಿಗೆ ಬರುತ್ತಿವೆ' ಎಂದು ಕಳವಳ ವ್ಯಕ್ತಪಡಿಸಿದರು.