ಮಲಯಾಳಂ ಲೇಖಕ ವೈ.ಕಂ ಮಹಮ್ಮದ್ ಬಶೀರ್ ಅವರ ‘ಪ್ರೇಮ ಲೇಖನಂ’ ಕಥೆ (ಅನುವಾದ: ಎಸ್. ಗಂಗಾಧರಯ್ಯ) ಆಧರಿಸಿ ತಯಾರಾಗಿರುವ ಕಿರುಚಿತ್ರ ‘ನಿರೀಕ್ಷೆ’.
ಒಂದು ಸುಂದರ ಬದುಕನ್ನು ಅರಸುತ್ತಿರುವ ಎರಡು ಜೀವಗಳ ಕಥೆ ಇದು ಎನ್ನುತ್ತಾರೆ ನಿರ್ದೇಶಕ ರಾಘು ಶಿವಮೊಗ್ಗ. ಜಾತಿ-ಧರ್ಮ ಮತ್ತು ಕೌಟುಂಬಿಕ ಸಮಸ್ಯೆಗಳ ಕಟ್ಟಳೆಗಳನ್ನು ಮೀರಿ ನಿಲ್ಲುವಲ್ಲಿ ನಾಯಕ-ನಾಯಕಿ ಯಶಸ್ವಿಯಾಗುತ್ತಾರೆ ಎಂಬುದು ಈ ಚಿತ್ರದ ತಿರುಳಂತೆ.
ನಾಲ್ಕು ದಿನಗಳಲ್ಲಿ ಚಿತ್ರೀಕರಣ ಮಾಡಿರುವ ಈ ಚಿತ್ರದ ನಾಯಕ, ನಾಯಕಿ, ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರಿಗೆ ಇದು ಮೊದಲ ಪ್ರಯತ್ನ.
ಆಶಾ ಸುರೇಂದ್ರ ಮತ್ತು ಕೆ. ಎಸ್. ಸುರೇಂದ್ರ ನಿರ್ಮಿಸಿರುವ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ರಾಘು. ನಾಯಕ ಶ್ರೇಯಸ್, ನಾಯಕಿ ಅದಿತಿ ಕಲ್ಕುಂಟೆ, ಛಾಯಾಗ್ರಾಹಕ ಕಣ್ಣನ್ ಸಿ, ಸಂಕಲನಕಾರ ಕೆ ಪ್ರದೀಪ್ ಕೆಜಿಎಫ್, ಸಂಗೀತ ನಿರ್ದೇಶಕ ಸುಮೇರು ರಾವುತ್ (ಮುಂಬೈ).
ಇತ್ತೀಚೆಗೆ ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಚಿತ್ರದ ಪ್ರದರ್ಶನ ಏರ್ಪಡಿಸಲಾಗಿತ್ತು. ಸುಮಾರು 42 ನಿಮಿಷದ ಈ ಕಿರುಚಿತ್ರ ಪ್ರದರ್ಶನದಲ್ಲಿ ನಟರಾದ ಅಜಯ್ ರಾವ್, ಅಚ್ಯುತಕುಮಾರ್, ಕಥೆಗಾರ ಎಸ್.ಗಂಗಾಧರಯ್ಯ ಭಾಗವಹಿಸಿದ್ದರು.