ಬೀದರ್: ಪರಿಸರವಾದಿ ಸುಂದರಲಾಲ್ ಬಹುಗುಣ ಇಕೋ ಕ್ಲಬ್ ಉದ್ಘಾಟನಾ ಸಮಾರಂಭ ತಾಲ್ಲೂಕಿನ ಕಮಠಾಣ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ನಡೆಯಿತು.
ರಾಷ್ಟ್ರೀಯ ಹಸಿರು ಪಡೆ ಯೋಜನೆ ನಿಮಿತ್ತ ಏರ್ಪಡಿಸಿದ್ದ ಪರಿಸರ ಸಂರಕ್ಷಣೆ ಕುರಿತ ಜನಜಾಗೃತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪರಿಸರ ವಾಹಿನಿಯ ಅಧ್ಯಕ್ಷ ಶೈಲೇಂದ್ರ ಕಾವಡಿ ಕ್ಲಬ್ನ್ನು ಉದ್ಘಾಟಿಸಿದರು.
ಪರಿಸರ ಸಮತೋಲನ ಕಾಪಾಡುವಲ್ಲಿ ಮರಗಳ ಪಾತ್ರ ಮಹತ್ವದ್ದಾಗಿದೆ. ಆದರೆ, ಪ್ರಸ್ತುತ ಕಾಡುಗಳು ನಾಶವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ತಿಳಿಸಿದರು.
ಪರಿಸರ ನಾಶ ಇದೇ ರೀತಿ ಮುಂದುವರೆದರೆ ಜೀವ ಸಂಕುಲಕ್ಕೆ ಭಾರಿ ಆಪತ್ತು ಎದುರಾಗಲಿದೆ. ತಾಪಮಾನ ಹೆಚ್ಚಳದಿಂದ ಪ್ರಕೃತ ವಿಕೋಪಗಳು ಸಂಭವಿಸಲಿವೆ ಎಂದು ಹೇಳಿದರು.
ಪ್ರತಿಯೊಬ್ಬರು ಭವಿಷ್ಯಕ್ಕಾಗಿ ಮರಗಿಡಗಳನ್ನು ನೆಡಬೇಕು. ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸುವುದಕ್ಕಾಗಿ ಮಗುವಿಗೊಂದು ಮರ- ಶಾಲೆಗೊಂದು ವನ ಯೋಜನೆ ಜಾರಿಗೆ ಬಂದಿದೆ ಎಂದರು.
ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ. ಕಡ್ಡಾಯವಾಗಿ ಮನೆಗೆ ಎರಡು ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಬೇಕು ಎಂದು ಕಾಲೇಜಿನ ಪ್ರಾಚಾರ್ಯ ಸೋಮನಾಥ ವೊಲದೊಡ್ಡಿ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಾದ ಅಶ್ವಿನಿ, ಮಮಿತಾ, ಅಂಬಿಕಾ ಮಾತನಾಡಿದರು. ಪರಮೇಶ್ವರ ದಾಂಡೆ ಸಂಗೀತ ಪ್ರಸ್ತುತಪಡಿಸಿದರು. ಉಪನ್ಯಾಸಕರಾದಶ್ರೀನಿವಾಸ ಪಾಂಚಾಳ್, ಭಾರತಿ ವಸ್ತ್ರದ್, ಖುರ್ಷಿದ್ ಬೇಗಂ, ಶಿವರಾಜ ಶ್ರೀಮಂಗಲೆ, ಮೀನಾಕ್ಷಿ ಉಪಸ್ಥಿತರಿದ್ದರು.
ಚಂದ್ರಶೇಖರ ವಾಘಮಾರೆ ಸ್ವಾಗತಿಸಿದರು. ಭೀಮಷಾ ನಾಟಿಕರ್ ನಿರೂಪಿಸಿದರು. ಉಪನ್ಯಾಸಕ ರಮೇಶ ವೈದ್ಯ ವಂದಿಸಿದರು. ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.