ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗಮ ಸಂಚಾರಕ್ಕೆ ಕ್ರಮ: ಜಿಲ್ಲಾಧಿಕಾರಿ ಆದೇಶ

Last Updated 19 ಅಕ್ಟೋಬರ್ 2012, 5:40 IST
ಅಕ್ಷರ ಗಾತ್ರ

ಕೊಪ್ಪಳ: ನಗರವು ತೀವ್ರವಾಗಿ ಬೆಳೆಯುತ್ತಿದ್ದು, ದಿನೇದಿನೇ ವಾಹನ ಸಂಚಾರ ಮತ್ತು ಜನದಟ್ಟಣೆಯಿಂದ ಸುಗಮ ಸಂಚಾರಕ್ಕೆ ತೊಂದರೆಯುಂಟಾಗುತ್ತಿದೆ. ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಗರದ ಪ್ರಮುಖ ಸ್ಥಳಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಆದೇಶ ಹೊರಡಿಸಿದ್ದಾರೆ.

ನಗರದ ಜವಾಹರ ರಸ್ತೆಯ ಅಶೋಕ ವೃತ್ತದಿಂದ-ಬಹದ್ದೂರಬಂಡಿ ಕ್ರಾಸ್, ಸಾಲಾರಜಂಗ್ ರಸ್ತೆಯ ಹಳೇ ಡಿಸಿ ಕಚೇರಿ ವೃತ್ತದಿಂದ- ಶಾರದಾ ಚಿತ್ರಮಂದಿರದವರೆಗೆ, ಗವಿಮಠ ರಸ್ತೆಯ ಬಸವೇಶ್ವರ ವೃತ್ತದಿಂದ- ಗಡಿಯಾರ ಕಂಬದವರೆಗೆ, ಮೀನು ಮಾರುಕಟ್ಟೆಯಿಂದ- ಹಸನ್ ವೃತ್ತದವರೆಗೆ ಪ್ರತಿ ದಿನ ಮುಂಜಾನೆ 8.30 ರಿಂದ ರಾತ್ರಿ 9 ಗಂಟೆಯವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ರಸ್ತೆಯ ಎಡಭಾಗದಲ್ಲಿ (ರಸ್ತೆಯ ಪೂರ್ವದ ಬದಿಗೆ) ಮತ್ತು ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ರಸ್ತೆಯ ಬಲಭಾಗದಲ್ಲಿ (ಪಶ್ಚಿಮ ಬದಿಗೆ) ವಾಹನ ಪಾರ್ಕಿಂಗ್ ಸಲುವಾಗಿ ದಿನ ನಿಗದಿಪಡಿಸಲಾಗಿದೆ.

ನಗರದ ರಾ.ಹೆ. 63ರ ಹೊಸಪೇಟೆ ರಸ್ತೆಯ ಅಗ್ನಿಶಾಮಕ ಠಾಣೆಯಿಂದ ಗದಗ ರಸ್ತೆಯ ಹಿರೇಹಳ್ಳ ಸೇತುವೆ ವರೆಗೆ, ಕುಷ್ಟಗಿ ರಸ್ತೆಯ ಸ್ವಾಗತ ಕಮಾನದಿಂದ (ಗವಿಮಠ ರಸ್ತೆಯನ್ನು ಒಳಗೊಂಡು) ಗಡಿಯಾರ ಕಂಬದವರೆಗೆ, ಸಿಂದೋಗಿ ರಸ್ತೆಯಿಂದ (ಜವಾಹರ ರಸ್ತೆ ಒಳಗೊಂಡು) ಕಿನ್ನಾಳ ರಸ್ತೆಯ ಭಾಗ್ಯನಗರ ಕ್ರಾಸ್‌ವರೆಗೆ, ನಗರದ ಬಸ್ ನಿಲ್ದಾಣದಿಂದ ಭಾಗ್ಯನಗರ ಬಸ್ ನಿಲ್ದಾಣದವರೆಗೆ- ಈ ಮಾರ್ಗಗಳಲ್ಲಿ ವಾಹನದ ಸಂಚಾರ ಹೆಚ್ಚಾಗಿ ಇರುವುದರಿಂದ ವಾಹನಗಳು ಗಂಟೆಗೆ 40 ಕಿ.ಮೀ. ವೇಗದಲ್ಲಿ ಚಲಿಸಲು ಆದೇಶಿಸಿದೆ.

ರಾ.ಹೆ. 63 ರಸ್ತೆಯ ಜಿಲ್ಲಾಧಿಕಾರಿ ಕಾರ್ಯಾಲಯ, ಎಸ್‌ಎಫ್‌ಎಸ್ ಸ್ಕೂಲ್, ಕೊಣ್ಣೂರು ಹೆರಿಗೆ ಆಸ್ಪತ್ರೆ, ಬಾಲಕರ ಸರ್ಕಾರಿ ಶಾಲೆ, ನಗರ ಸಭೆ, ಎಲ್‌ಐಸಿ ಕಚೇರಿ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಶಾಸಕರ ಮಾದರಿ ಶಾಲೆ (ಕೇಂದ್ರಿಯ ವಿದ್ಯಾಲಯ), ಪಾಟೀಲ್ ಆಸ್ಪತ್ರೆ, ಹಿಂದಿ ಬಿಇಡಿ ಕಾಲೇಜ್, ಟ್ರಿನಿಟಿ ಶಾಲೆ, ಡಾ.ಕೆ.ಜಿ.ಕುಲಕರ್ಣಿ ಆಸ್ಪತ್ರೆ, ಯಶೋ ಆಸ್ಪತ್ರೆ, ಚಂದ್ರಿಕಾ ಆಸ್ಪತ್ರೆ, ಚಿನ್ಮಯಿ ಆಸ್ಪತ್ರೆ, ತಹಶೀಲ್ದಾರ್ ಕಚೇರಿ, ಕೋರ್ಟ್ ಹತ್ತಿರ ವಾಹನಗಳು ಶಬ್ದ ಮಾಲಿನ್ಯ ಮಾಡದಂತೆ ಕ್ರಮ ವಹಿಸಬೇಕು ಎಂದೂ ಸೂಚಿಸಿದ್ದಾರೆ.

ಜವಾಹರ ರಸ್ತೆಯ ಗಡಿಯಾರ ಕಂಬದಿಂದ ಅಶೋಕ ವೃತ್ತದವರೆಗೆ ಭಾರಿ ವಾಹನಗಳು ಅನ್‌ಲೋಡಿಂಗ್ ಸಲುವಾಗಿ ನಿಲ್ಲುವುದರಿಂದ ವಾಹನ ದಟ್ಟಣೆಯಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಈ ಸ್ಥಳದಲ್ಲಿ ಪ್ರತಿ ದಿನ ಮುಂಜಾನೆ 9 ಗಂಟೆಯೊಳಗೆ, ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯೊಳಗೆ ಮತ್ತು ರಾತ್ರಿ 8 ಗಂಟೆಯ ನಂತರ ಅನ್‌ಲೋಡ್ ಮಾಡಲು ಆದೇಶಿಸಿದ್ದಾರೆ.

ಬಸವೇಶ್ವರ ವೃತ್ತ, ಹಳೆ ಡಿಸಿ ವೃತ್ತ, ಅಶೋಕ ವೃತ್ತದ ಕಿನ್ನಾಳ ರಸ್ತೆ, ನಗರದ ಬಸ್ ನಿಲ್ದಾಣದ ಮುಂದೆ, ಬನ್ನಿಕಟ್ಟಿ ಹತ್ತಿರ, ಗವಿಮಠದ ಮುಂದೆ, ಗೋಶಾಲೆಯ ಹತ್ತಿರ, ಜಿಲ್ಲಾಧಿಕಾರಿ ಕಚೇರಿ ಮುಂದೆ, ಜಗಜೀವನರಾಮ್ ಸರ್ಕಲ್, ಆಜಾದ್ ಸರ್ಕಲ್, ರೈಲ್ವೆ ನಿಲ್ದಾಣದ ಹತ್ತಿರದ ಸ್ಥಳಗಳನ್ನು ಆಟೋ ರಿಕ್ಷಾ ನಿಲ್ದಾಣಗಳೆಂದು  ಗುರುತಿಸಲಾಗಿದೆ.

ನಗರದ ಸಾರ್ವಜನಿಕ ಮೈದಾನ, ಬಸವೇಶ್ವರ ವೃತ್ತದ ಎಸ್‌ಬಿಎಂ, ಕುಷ್ಟಗಿ ರಸ್ತೆಯಲ್ಲಿ, ಜಿಲ್ಲಾಧಿಕಾರಿಯವರ ಕಚೇರಿ, ಅಗ್ನಿ ಶಾಮಕ ಠಾಣೆ, ಕೋರ್ಟ್, ಗವಿಮಠ, ಗೋಶಾಲೆ, ಬನ್ನಿಕಟ್ಟಿ, ಅಶೋಕ ವೃತ್ತದ ಕಿನ್ನಾಳ ರೋಡ್, ಕಿನ್ನಾಳ ರಸ್ತೆಯ ಭಾಗ್ಯನಗರ ಕ್ರಾಸ್, ಗಡಿಯಾರ ಕಂಬದ ಹತ್ತಿರ ಈ ಸ್ಥಳಗಳನ್ನು ಸಿಟಿ ಬಸ್ ನಿಲ್ದಾಣಗಳೆಂದು ಗುರುತಿಸಲಾಗಿದೆ.

ವಾರಕಾರ್ ಓಣಿಯ ರಸ್ತೆಯಲ್ಲಿ ಆಜಾದ್ ಸರ್ಕಲ್‌ದಿಂದ ಹಸನ್ ರಸ್ತೆಗೆ ಕೂಡುವ ರಸ್ತೆಯಲ್ಲಿ, ಜವಾಹರ ರಸ್ತೆಯ ಹುಣಸೆ ಮರದ ಹತ್ತಿರದ ರಸ್ತೆಯಲ್ಲಿ ಕಾರ್ ಪಾರ್ಕಿಂಗ್ ಮಾಡಲು ಆದೇಶಿಸಿದೆ.

ಗಡಿಯಾರ ಕಂಬದಿಂದ ಆಜಾದ್ ಸರ್ಕಲ್ ದವರೆಗೆ ಏಕಮುಖ ರಸ್ತೆ ಎಂದು ಗುರುತಿಸಲಾಗಿದೆ.
 ಸಾರ್ವಜನಿಕರು, ವಾಹನಗಳ ಮಾಲಿಕರು ಹಾಗೂ ಸಂಬಂಧಪಟ್ಟವರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT