ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗಮ ಸಂಚಾರಕ್ಕೆ ಸಂಚಕಾರ; ಅಪಾಯ ಅಪಾರ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ನಿರ್ಮಾಣವಾದ ಕೆ.ಎಚ್.ರಸ್ತೆ (ಡಬಲ್ ರೋಡ್) ಮೇಲ್ಸೇತುವೆ ಈಗ ತನ್ನ ದುಸ್ಥಿತಿಯಿಂದಾಗಿ ಟ್ರಾಫಿಕ್ ಕಿರಿಕಿರಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಬಹುತೇಕ ಕಿತ್ತು ಹೋದ ರಸ್ತೆ, ಅಲ್ಲಲ್ಲಿ ಕಂಡು ಬರುವ ಗುಂಡಿಗಳು, ಬೆಳಕು ಬೀರದ ವಿದ್ಯುತ್ ಕಂಬಗಳು ಹಾಗೂ ಅಸ್ತವ್ಯಸ್ತವಾದ ರಸ್ತೆ ವಿಭಜಕಗಳಿಂದಾಗಿ ಮೊದಲೇ ಅವೈಜ್ಞಾನಿಕ ನಿರ್ಮಾಣ ಎಂಬ `ಕೀರ್ತಿ~ಗೆ ಪಾತ್ರವಾಗಿರುವ ಸೇತುವೆಯನ್ನು ನಗರದ ಜನ ಮತ್ತಷ್ಟು ಶಪಿಸುವಂತಾಗಿದೆ.

ರಿಚ್ಮಂಡ್ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆಯ ಸಂಚಾರ ದಟ್ಟಣೆ ನಿವಾರಿಸುವ ಸಲುವಾಗಿ ನಿರ್ಮಾಣವಾದ ಇಂಗ್ಲಿಷ್‌ನ ಎಕ್ಸ್ ಆಕಾರದ ಮೇಲ್ಸೇತುವೆ, ಎಂ.ಜಿ.ರಸ್ತೆಯಲ್ಲಿ ಮೆಟ್ರೊ ಕಾಮಗಾರಿ ಆರಂಭವಾದ ನಂತರ ಮತ್ತಷ್ಟು ಸಂಚಾರ ಒತ್ತಡವನ್ನು ಭರಿಸಬೇಕಾಯಿತು. ವಾಹನ ಚಾಲಕರ ಪ್ರತಿರೋಧ ಉಂಟಾದ ಹಿನ್ನೆಲೆಯಲ್ಲಿ 2009ರ ನಂತರ ಮೇಲ್ಸೇತುವೆಯಲ್ಲಿದ್ದ ಸಿಗ್ನಲ್ ವ್ಯವಸ್ಥೆ ತೆಗೆದು ಹಾಕಲಾಯಿತು. ರಿಚ್ಮಂಡ್ ರಸ್ತೆಯಿಂದ ಕೆ.ಎಚ್.ರಸ್ತೆ ಕಡೆಗೆ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಇದರಿಂದಾಗಿ ಕೆ.ಎಚ್.ರಸ್ತೆಯಿಂದ ಆರಂಭವಾಗುವ ಮೇಲ್ಸೇತುವೆ ರಸ್ತೆ ಕಿರಿದಾಯಿತು.

ಕೆಲ ದಿನಗಳ ಹಿಂದೆ ರಾತ್ರಿ ವೇಳೆ ರಸ್ತೆ ವಿಭಜಕವನ್ನು ಕಾಣದೆ ಕಾರೊಂದು ಅಪಘಾತಕ್ಕೆ ಈಡಾಯಿತು. ಕಾರಿನ ಚಕ್ರಕ್ಕೆ ಹಾನಿಯಾಗುವ ಜೊತೆಯಲ್ಲಿ ವಿಭಜಕ ಸಹ ಕಿತ್ತು ಹೋಗಿದೆ.

ಮಿಷನ್ ರಸ್ತೆ ಹಾಗೂ ಕೆ.ಎಚ್.ರಸ್ತೆಯಿಂದ ರೆಸಿಡೆನ್ಸಿ ರಸ್ತೆಗೆ ತೆರಳುವ ಹಾಗೂ ರಿಚ್ಮಂಡ್ ರಸ್ತೆಯಿಂದ ಕೆ.ಎಚ್.ರಸ್ತೆ ಕಡೆಗೆ ಸಂಪರ್ಕ ಕಲ್ಪಿಸುವ  ಮೇಲ್ಸೇತುವೆಯ ರಸ್ತೆಗಳು ಮೊದಲೇ ಹಾಳಾಗ್ದ್ದಿದು, ಮಳೆಗಾಲ ಆರಂಭವಾದ ಬಳಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಗುಂಡಿ ಬಿದ್ದ ರಸ್ತೆಯಲ್ಲಿ ಮಂದಗತಿಯ ಸಂಚಾರ ಅನಿವಾರ್ಯ. `ಪೀಕ್ ಅವರ್~ ಅವಧಿಯಲ್ಲಿ ಕೆ.ಎಚ್.ರಸ್ತೆ ಹಾಗೂ ರಿಚ್ಮಂಡ್ ರಸ್ತೆಗಳಲ್ಲಿ ಕೆಲವೊಮ್ಮೆ ಗಂಟೆಗಟ್ಟಲೆ ವಾಹನಗಳು ನಿಂತಲ್ಲೇ ನಿಲ್ಲುತ್ತವೆ.

ರಿಚ್ಮಂಡ್ ರಸ್ತೆಯಿಂದ ಪ್ರವೇಶಿಸುವ ವಾಹನಗಳು ಇಕ್ಕಟ್ಟಾದ ರಸ್ತೆಯಲ್ಲಿ ಸಂಚರಿಸುವ ಅನಿವಾರ್ಯತೆ ಇದೆ. ಇಲ್ಲಿ ಹಾಕಲಾದ ರಸ್ತೆ ವಿಭಜಕ ಒಂದು ಲಘು ವಾಹನ ಸಂಚರಿಸುವಷ್ಟು ಮಾತ್ರ ಸ್ಥಳಾವಕಾಶ ಕಲ್ಪಿಸಿದೆ. ವಿಭಜಕಕ್ಕೆ ಹಾಕಲಾದ ಕಾಂಕ್ರಿಟ್ ಇಟ್ಟಿಗೆಗಳು ಕಿತ್ತು ಹೋಗಿ ಸಂಚಾರಕ್ಕೆ ಅಡ್ಡಿಪಡಿಸುತ್ತವೆ.

ಮಳೆ ಸುರಿದಾಗ ರಸ್ತೆಯ ಮೇಲೆ ಹಾದು ಹೋಗುವವರಿಗೆ ಗುಂಡಿಗಳು ಎಲ್ಲಿವೆ ಎಂಬುದು ಗೋಚರಿಸದ ಸ್ಥಿತಿ ಇದೆ. ಮಳೆ ನೀರು ಹರಿಯಲೆಂದು ಮೇಲ್ಸೇತುವೆ ಮೇಲೆ ರೂಪಿಸಲಾದ ಕಿಂಡಿಗಳು ಹೂಳು ತುಂಬಿವೆ. ಇವುಗಳ ಮೇಲೆ ಅಳವಡಿಸಲಾದ ಮುಚ್ಚಳದ ಸರಳುಗಳು ಕಿತ್ತು ಬಂದಿವೆ. ರಸ್ತೆ ಬದಿ ಕಳೆಗಿಡಗಳು ಬೆಳೆದು ಮೇಲ್ಸೇತುವೆಯ ದುಸ್ಥಿತಿಯನ್ನು ಸಾರಿ ಹೇಳುತ್ತಿವೆ.

ಇಷ್ಟೆಲ್ಲಾ ಅಪಾಯಗಳನ್ನು ಹೊಂದಿದ ಮೇಲ್ಸೇತುವೆಗೆ ರಾತ್ರಿ ವೇಳೆ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲ. ಎರಡೂ ಬದಿ ಕಂಬಗಳಿದ್ದರೂ ಒಂದು ಬದಿಯ ರಸ್ತೆಗೆ ಮಾತ್ರ ಬೆಳಕು ಬೀಳುತ್ತದೆ. ಅನೇಕ ಕಡೆ ವಿದ್ಯುತ್ ಬಲ್ಬ್‌ಗಳು ಮಾಯವಾಗಿವೆ. ಎಲ್‌ಇಡಿ ಬಲ್ಬ್‌ಗಳದ್ದೂ ಕೂಡ ಇದೇ ಸ್ಥಿತಿ ಎನ್ನುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಮೇಲ್ಸೇತುವೆ ಸಮಸ್ಯೆ: ಸುಗಮ ಸಂಚಾರ ಸಾಧ್ಯವಾಗದ ಕಾರಣ 18 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಮೇಲ್ಸೇತುವೆ ಚಾಲಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಕೆ.ಎಚ್.ರಸ್ತೆ ಹಾಗೂ ಮಿಷನ್ ರಸ್ತೆಯಿಂದ ರೆಸಿಡೆನ್ಸಿ ರಸ್ತೆಗೆ ತೆರಳುವ ಬಹುತೇಕ ವಾಹನ ಚಾಲಕರು ಮೇಲ್ಸೇತುವೆಯನ್ನು ಬಳಸುತ್ತಿಲ್ಲ.
 ಬದಲಿಗೆ ರಿಚ್ಮಂಡ್ ವೃತ್ತದ ಮೂಲಕ ಹಾದು ಹೋಗುವ ಸುಲಭ ಉಪಾಯಕ್ಕೆ ಮೊರೆ ಹೋಗಿದ್ದಾರೆ. ಮೇಲ್ಸೇತುವೆ ನಿರ್ಮಾಣದ ನಂತರ ಮೊದಲೇ ಇಕ್ಕಟ್ಟಾಗಿದ್ದ ಕೆಳಭಾಗದ ರಸ್ತೆಯಲ್ಲಿನ ಸಂಚಾರ ಈಗ ಇನ್ನಷ್ಟು ಸಮಸ್ಯೆ ತಂದೊಡ್ಡಿದೆ.

ಇತರೆ ಸಮಸ್ಯೆಗಳು: ಮೇಲ್ಸೇತುವೆ ಕೆಳಭಾಗದಲ್ಲಿ ಬ್ಯಾರಿಕೇಡ್‌ಗಳು ಮುರಿದು ಹೋಗಿರುವುದರಿಂದ ಖಾಲಿ ಸ್ಥಳದಲ್ಲಿ ಪಾದಚಾರಿಗಳು ಅಡ್ಡಾದಿಡ್ಡಿ ಸಂಚರಿಸುತ್ತಾರೆ. ಅಲ್ಲದೆ ಪಾನಮತ್ತರು, ಸೋಮಾರಿಗಳಿಗೆ ಕಾಲ ಹರಣ ಮಾಡಲು ಇದು ಸೂಕ್ತ ಜಾಗವಾಗಿದೆ. ಅಲ್ಲದೆ ಮೇಲ್ಸೇತುವೆಯ ಕಂಬಗಳಿಗೆ ಪೋಸ್ಟರ್‌ಗಳನ್ನು ಅಂಟಿಸಿ ದೃಶ್ಯ ಮಾಲಿನ್ಯ ಉಂಟು ಮಾಡುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. 

ಮೇಲ್ಸೇತುವೆಯ ಕೆಳಭಾಗದಲ್ಲಿ `ಹಸಿರು ಸೃಷ್ಟಿಸುವ~ ಬಿಬಿಎಂಪಿ ಯತ್ನ ವಿಫಲಾಗಿದೆ. ಮೇಲ್ಸೇತುವೆ ಮಧ್ಯದ ಖಾಲಿ ಜಾಗದಲ್ಲಿ ನೆಡಲಾದ ಗಿಡಗಳು ನಿರ್ವಹಣೆ ಇಲ್ಲದೆ ಸೊರಗಿವೆ. ಸುತ್ತಲಿನ ಕಟ್ಟಡಗಳು ಹಾಗೂ ಮೇಲ್ಸೇತುವೆಯಿಂದಾಗಿ ಸೂರ್ಯನ ಕಿರಣಗಳು ಅಲಂಕಾರಿಕ ಸಸ್ಯಗಳನ್ನು ತಲುಪುತ್ತಿಲ್ಲ. ನಗರ ಸೌಂದರ್ಯ ಹೆಚ್ಚಿಸಬೇಕಿದ್ದ ಕಾರಂಜಿಗಳಲ್ಲಿ ನೀರು ಚಿಮ್ಮಿ ಅದೆಷ್ಟೋ ದಿನಗಳು ಕಳೆದಿವೆ ಎಂಬ ಅತೃಪ್ತಿ ಕೇಳಿ ಬರುತ್ತಿದೆ.
 

ಕೈ ತುಂಬ ದುಡ್ಡಿದ್ದು ಗಾಡಿಗಳನ್ನು ರಿಪೇರಿ ಮಾಡಿಸುವ ಶಕ್ತಿ ಇರುವವರು ಮಾತ್ರ ಮೇಲ್ಸೇತುವೆ ಮೇಲೆ ಸಂಚರಿಸಬಹುದು. ಪ್ರಯಾಣಿಕರು ರಸ್ತೆಯನ್ನು ಶಪಿಸುವುದಿಲ್ಲ, ಬದಲಿಗೆ ಚಾಲಕರನ್ನು ನಿಂದಿಸುತ್ತಾರೆ. ಆದ್ದರಿಂದ ಎಷ್ಟೋ ಬಾರಿ ಮೇಲ್ಸೇತುವೆ ಕೆಳಭಾಗದಲ್ಲಿಯೇ ಸಂಚರಿಸುತ್ತೇವೆ. 
 ರಾಮರಾಜು, ಆಟೊ ಚಾಲಕ

ರಸ್ತೆ ಹದಗೆಟ್ಟಿರುವುದರಿಂದ ಪದೇ ಪದೇ ಇಲ್ಲಿ ವಾಹನಗಳು ಕೆಟ್ಟು ನಿಲ್ಲುತ್ತವೆ. ಆ ವಾಹನಗಳನ್ನು ಸ್ಥಳಾಂತರಿಸಲು ಕೂಡ ಸೂಕ್ತ ಅವಕಾಶ ಇಲ್ಲ. ಮೊದಲೇ ರಸ್ತೆ ಕಿರಿದಾಗಿರುವುದರಿಂದ ವಾಹನಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುತ್ತವೆ.
  -ಪಾರ್ವತಿ, ದ್ವಿಚಕ್ರ ವಾಹನ ಹೊಂದಿರುವ,ಕಾಲ್ ಸೆಂಟರ್ ಉದ್ಯೋಗಿ

ಕೆ.ಎಚ್.ರಸ್ತೆ, ಮಿಷನ್ ರಸ್ತೆ ಹಾಗೂ ರೆಸಿಡೆನ್ಸಿ ರಸ್ತೆಗಳ ಜತೆಗೆ ಮೇಲ್ಸೇತುವೆ ಕೂಡ ಹಾಳಾಗಿದೆ. ರಸ್ತೆಯ ಮೇಲೆ ಸಂಚರಿಸುವಾಗಲೂ ನೆಮ್ಮದಿ ಇರುವುದಿಲ್ಲ. ಮೇಲ್ಸೇತುವೆ ಮೇಲಿನ ಸಂಚಾರ ಕೂಡ ಕಷ್ಟಕರವಾಗಿದೆ.
 -ಚಲುವರಾಯಸ್ವಾಮಿ, ಕಾರು ಮಾಲೀಕ

ರಾಜಧಾನಿಯ ಮೇಲ್ಸೇತುವೆಯನ್ನೇ ದುರಸ್ತಿ ಮಾಡಲಾಗುವುದಿಲ್ಲ. ಇನ್ನು ರಾಜ್ಯದ ಅಭಿವೃದ್ಧಿ ಮಾಡುತ್ತೇವೆ ಎಂಬ ಮಾತಿಗೆ ಅರ್ಥ ಎಲ್ಲಿದೆ. ಸರ್ಕಾರ ಸಮಸ್ಯೆಗಳನ್ನು ಪರಿಹರಿಸಬೇಕು. ಸಮಸ್ಯೆಯನ್ನು ತಾನೇ ಸೃಷ್ಟಿಸಬಾರದು.
-ಜಾರ್ಜ್, ವಿಕ್ಟೋರಿಯಾ ಬಡಾವಣೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT