ಕಂಪ್ಲಿ: ಇಲ್ಲಿಗೆ ಸಮೀಪದ ಸುಗ್ಗೇನಹಳ್ಳಿ ಗ್ರಾಮದ ಚಲುವಾದಿ ದೇವದಾಸಿ ಶೇಕಮ್ಮ ಅವರ ಹೊಲದ ಕಬ್ಬಿನ ಬೆಳೆ ಮಂಗಳವಾರ ರಾತ್ರಿ ಮಳೆ ಗಾಳಿಗೆ ಸಂಪೂರ್ಣ ಹಾಳಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಈ ಕಬ್ಬಿನ ಬೆಳೆ ಇನ್ನು ನಾಲ್ಕು ತಿಂಗಳಲ್ಲಿ ಕಟಾವು ಸಿದ್ಧವಾಗುತ್ತಿತ್ತು. ಆದರೆ ವರುಣ ಮತ್ತು ವಾಯುದೇವನ ಆರ್ಭಟಕ್ಕೆ ಸುಮಾರು ಒಂದು ಎಕರೆ ಕಬ್ಬಿನ ಬೆಳೆ ಸಂಪೂರ್ಣ ನೆಲ ಕಚ್ಚಿದ್ದು, ಇದನ್ನೇ ನಂಬಿದ್ದ ದೇವದಾಸಿ ಕುಟುಂಬ ಕಂಗಾಲಾಗಿದೆ.
`ಒಂದು ಎಕರೆಗೆ ಇಲ್ಲಿಯವರೆಗೆ ಸುಮಾರು ರೂ. 50 ಸಾವಿರ ವೆಚ್ಚ ಮಾಡಿದ್ದು, ಮಾರಾಟ ಮಾಡಿದ ಮೇಲೆ ಹೊಲದ ಮಾಲೀಕ ಮಲ್ಲಪ್ಪನಿಗೆ ಗುತ್ತಿಗೆ ಪಾವತಿಸಿ ಇನ್ನುಳಿದ ಹಣದಲ್ಲಿ ನನ್ನ ಮಗ ಚಲುವಾದಿ ಪುರುಷೋತ್ತಮಗೆ ವಿವಾಹ ಮಾಡಬೇಕು ಅಂದುಕೊಂಡಿದ್ದೆ. ಆದರೆ ವಿಧಿ ನನ್ನನ್ನು ಕೈಹಿಡಿಯಲಿಲ್ಲ~ ಎಂದು ದೇವದಾಸಿ ಶೇಕಮ್ಮ ದುಃಖದಿಂದ `ಪ್ರಜಾವಾಣಿ~ಗೆ ತಿಳಿಸಿದರು.
ಕಬ್ಬಿನ ಬೀಜ ಮತ್ತು ರಸಾಯನಿಕ ಗೊಬ್ಬರಕ್ಕೆ ಆರ್ಥಿಕ ನೆರವು ನೀಡಿದ್ದ ಸಿರುಗುಪ್ಪ ದೇಶನೂರು ಸಕ್ಕರೆ ಕಾರ್ಖಾನೆ ಸಿಬ್ಬಂದಿಗೆ ಕಬ್ಬಿನ ಬೆಳೆ ಹಾಳಾಗಿರುವ ಬಗ್ಗೆ ಮಾಹಿತಿ ನೀಡಿದ್ದೇನೆ. ಅದೇ ರೀತಿ ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಲ್ಲಿಯೂ ಈ ಬಗ್ಗೆ ಮನವಿ ಮಾಡಿದ್ದೇನೆ. ಸರ್ಕಾರ, ಶಾಸಕರು, ಗಮನಹರಿಸಿ ನನಗಾಗಿರುವ ನಷ್ಟವನ್ನು ಭರ್ತಿ ಮಾಡಿಕೊಡಬೇಕು ಎಂದು ಅವರು ವಿನಂತಿಸಿದರು.