ಕಲಾಕ್ಷಿತಿ ಕಲಾ ಶಾಲೆಯ ಆಶ್ರಯದಲ್ಲಿ ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸುಚಿತ್ರ ದಿವಾಕರ್ ಅವರ ಭರತನಾಟ್ಯ ರಂಗಪ್ರವೇಶ ನಡೆಯಿತು.
ಎಂ.ಆರ್. ಕೃಷ್ಣಮೂರ್ತಿ ಅವರ ಬಳಿ 8 ವರ್ಷದವರಿದ್ದಾಗಲೇ ನೃತ್ಯಾಭ್ಯಾಸ ಆರಂಭಿಸಿದ ಸುಚಿತ್ರಾ, ರಂಗಪ್ರವೇಶದ ದಿನ ನೃತ್ಯದಲ್ಲಿ ತಮಗಿರುವ ಪರಿಣತಿಯನ್ನು ಪ್ರದರ್ಶಿಸಿದರು. ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿರುವ `ಮಾರ್ಗಂ~ ಪ್ರಕಾರವನ್ನು ಅವರು ಅಭಿನಯಿಸಿದರು.
ಸಾಂಪ್ರದಾಯಿಕ ಅಲರಿಪ್ಪುವಿನಿಂದ ಕಾರ್ಯಕ್ರಮ ಆರಂಭ. ನೃತ್ಯ ಸಮುದಾಯ ಮರೆಯುತ್ತಿರುವ `ಶಬ್ದಂ~ ಬಹು ಸುಂದರವಾಗಿ ಅಭಿನಯಿಸಿದರು. ಯಮುನಾ ತೀರದಲ್ಲಿ ಗೋಪಿಯರ ಜೊತೆ ಸರಸವಾಡುತ್ತಿರುವ ತುಂಟ ಕೃಷ್ಣನ ಲೀಲೆಗಳ ವರ್ಣನೆಯನ್ನು ಇದು ಒಳಗೊಂಡಿತ್ತು.
18ನೇ ಶತಮಾನದಲ್ಲಿ ಮೈಲಾಪುರ ಗೌರಿಅಮ್ಮಾಳ್ ಸಂಯೋಜಿಸಿದ ಬಹು ಅಪರೂಪದ ಹುಸೈನಿ ರಾಗವನ್ನು `ವರ್ಣಂ~ಗಾಗಿ ಆಯ್ದುಕೊಳ್ಳಲಾಗಿತ್ತು.
ಗುರುವಂದನೆಯ ನಂತರದ ಎರಡನೇ ಭಾಗದಲ್ಲೂ ಸುಚಿತ್ರಾ ಅಪೂರ್ವ ನೃತ್ಯ ಪ್ರದರ್ಶಿಸಿದರು.
ನೃತ್ತ, ಅಭಿನಯ, ಅಂಗಸುಧಾ ಎಲ್ಲ ವಿಭಾಗಗಳಲ್ಲೂ ಅವರು ಮೇಲುಗೈ ಸಾಧಿಸಿದ್ದರು. ಹರಿಪ್ರಸಾದ್ ಅವರ ಸಂಗೀತ ಈ ಕಾರ್ಯಕ್ರಮದ ಚೆಲುವು ಹೆಚ್ಚಿಸಿತು. ಒಟ್ಟಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾದ ಸುಚಿತ್ರಾಳ ರಂಗಪ್ರವೇಶದ ಪ್ರತಿ ಕ್ಷಣವೂ ಮನಮೋಹಕವಾಗಿತ್ತು.
ನಟುವಾಂಗದಲ್ಲಿ ಸುಮನಾ ನಾಗೇಶ್, ಮೃದಂಗದಲ್ಲಿ ಅನಿಲ್ ಕುಮಾರ್, ವಯಲಿನ್ನಲ್ಲಿ ಡಾ. ನಟರಾಜ ಮೂರ್ತಿ ಮತ್ತು ಕೊಳಲಿನಲ್ಲಿ ಗಣೇಶ್ ಸಹಕಾರ ಪೂರಕವಾಗಿತ್ತು.