ಚನ್ನರಾಯಪಟ್ಟಣ: ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಆಲೆಮನೆಯಲ್ಲಿನ ಯಂತ್ರಗಳು, ಬೆಲ್ಲದ ಮೂಟೆ ಸಂಪೂರ್ಣ ಸುಟ್ಟು ಸುಮಾರು ರೂ.2.25 ಲಕ್ಷ ನಷ್ಟ ಸಂಭವಿಸಿದ ಘಟನೆ ಮಂಗಳವಾರ ರಾತ್ರಿ ತಾಲ್ಲೂಕಿನ ಶೆಟ್ಟಿಹಳ್ಳಿಯಲ್ಲಿ ನಡೆದಿದೆ.
ಗೋಪಾಲ್, ಮುನಿರಾಜ್ ಸೋದರರಿಗೆ ಈ ಆಲೆಮನೆ ಸೇರಿದೆ. ಸಂಜೆ 7ರವರೆಗೆ ಬೆಲ್ಲ ತಯಾರಿಸಿ ಪಕ್ಕದಲ್ಲಿರುವ ಮನೆಗೆ ಇವರೆಲ್ಲ ಊಟಕ್ಕೆ ತೆರಳಿದಾಗ ಈ ಘಟನೆ ನಡೆದಿದೆ.
ರಾತ್ರಿ 10 ಗಂಟೆಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಉರಿಯಲಾರಂಭಿಸಿತು. 30 ಮೂಟೆ ಬೆಲ್ಲ, ಕ್ರಷರ್, ಬೆಲ್ಲ ತಯಾರಿಸುವ ಕೊಪ್ಪರಿಗೆ ಸುಟ್ಟು ಕರಕಲಾಗಿದೆ. ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿದ್ದ ನಾಲ್ಕು ತೆಂಗಿನ ಮರಗಳಿಗೂ ತಗುಲಿದೆ. ಗ್ರಾಮಸ್ಥರು ಅಗ್ನಿ ಶಾಮಕ ಸಿಬ್ಬಂದಿಗೆ ಸುದ್ದಿ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
‘ಕಳೆದ 15 ವರ್ಷಗಳಿಂದ ಆಲೆಮನೆಯಲ್ಲಿ ಬೆಲ್ಲ ತಯಾರಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿತ್ತು. ಈಗ ಆಲೆಮನೆ ಸುಟ್ಟು ಕರಕಲಾಗಿದ್ದು ಮುಂದೇನು ಮಾಡಬೇಕೆಂದು ತೋಚುತ್ತಿಲ್ಲ’ ಎಂದು ಗೋಪಾಲ್, ಮುನಿರಾಜ್ ಸೋದರರು ಅಳಲು ತೋಡಿಕೊಂಡರು.