ಗದಗ: `ಕಳೆದೆರೆಡು ವರ್ಷದ ಹಿಂದೆ ಅರ್ಜಿ ಹಾಕಿದ್ದೆ. ಪ್ರಶಸ್ತಿ ಸಿಕ್ಕಿರಲಿಲ್ಲ. ಈ ಬಾರಿ ಸಹ ಅರ್ಜಿ ಸಲ್ಲಿಸಿದ್ದು, ಪ್ರಶಸ್ತಿ ಲಭಿಸಿದೆ. ಅಕಾಡೆಮಿಯು ನನ್ನನ್ನು ಗುರುತಿಸಿ ಗೌರವಿಸಿರುವುದಕ್ಕೆ ಸಂತಸವಾಗಿದೆ~
ಇದು 2011ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಯಲ್ಲಪ್ಪ ದುರ್ಗಪ್ಪ ವಿಭೂತಿ ಅವರ ಸಂತಸದ ನುಡಿ.
ನಗರದ ರಾಜೀವ್ಗಾಂಧಿ ನಗರದ ಸಮೀಪದ ಸುಡಗಾಡು ಸಿದ್ಧರ ಕಾಲೊನಿಯಲ್ಲಿ ವಾಸಿಸುತ್ತಿರುವ ಇವರಿಗೆ ಸುಡಗಾಡು ಸಿದ್ಧರ ಕಲೆಯಲ್ಲಿ ಸಲ್ಲಿಸಿರುವ ಗಣನೀಯ ಸೇವೆಗಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಲೆಮಾರಿ ಜನಾಂಗದವರಾದ, 65 ವರ್ಷ ವಯಸ್ಸಿನ ಇವರು ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂ ಕಿನ ಹುಲಸನಹಟ್ಟಿಯವರಾಗಿದ್ದು ಕಳೆದ 45 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ.
ಎರಡು ದಶಕಗಳಿಂದ ಈ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೆಣಚುಕಲ್ಲಿನ ಗುಂಡು ನುಂಗುವುದು, ಚೌಡೇಶ್ವರಿ ಆಡಿಸುವುದು, ಮುಳ್ಳು ಆವಿಗೆ ನುಂಗುವುದು, ಗಜ್ಜುಗ ನುಂಗುವುದು, ಕೈಯಲ್ಲಿ ಚೇಳು ಮಾಡಿ ಚಮತ್ಕಾರಿಕೆ ತೋರಿಸುವುದು, ರೂಪಾಯಿ ಮಾಯ ಮಾಡುವುದು... ಹೀಗೆ ನಾನಾ ಸುಡಗಾಡು ಕಲೆಗಳಲ್ಲಿ ಯಲ್ಲಪ್ಪ ಪರಿಣತರು.
ಉಳಿದ ಜಾನಪದ ಕಲೆಗಳಂತೆ ಈ ಕಲೆಗೂ ಪ್ರೋತ್ಸಾಹ ಸಿಗಬೇಕು. ಈ ಮೂಲಕ ಜಿಲ್ಲಾ ಉತ್ಸವ ಸೇರಿದಂತೆ ಸಾಂಸ್ಕೃತಿಕ ಉತ್ಸವಗಳಲ್ಲಿ ಇದರ ಪ್ರದರ್ಶನಕ್ಕೆ ಅವಕಾಶ ಸಿಗಬೇಕು. ಮುಂದಿನ ಪೀಳಿಗೆಗೂ ಇದರ ಪ್ರಸಾರವಾಗಬೇಕು ಎನ್ನುವುದು ಇವರ ಆಶಯ. ಈ ಕಲೆಯ ಉಳಿವಿಗಾಗಿ ಎಲ್ಲರೂ ಕೈಜೋಡಿಸಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.